ಹಿಂದೂ ಧಾರ್ಮಿಕ ಸ್ಥಳಗಳ ಸಮೀಪ ಕಾಣಿಸಿಕೊಳ್ಳುವ ಗಡ್ಡಧಾರಿ, ಟೋಪಿಧಾರಿ ವ್ಯಕ್ತಿಗಳಿಗೆ ಥಳಿಸಬೇಕು ಎಂದ ಬಿಜೆಪಿ ಶಾಸಕ

ಬಿಜೆಪಿ ಶಾಸಕ ಕುಶ್ವಾಹ ಶಶಿ ಭೂಷಣ್ ಮೆಹ್ತಾ (Photo: X/@Mlasbmehta)
ಹೊಸದಿಲ್ಲಿ: ಗಡ್ಡಧಾರಿ ಅಥವಾ ಟೋಪಿಧಾರಿ ವ್ಯಕ್ತಿಗಳು ಅಥವಾ ಗೋಮಾಂಸ ತಿನ್ನುವವರು ಹಿಂದು ಧಾರ್ಮಿಕ ಸ್ಥಳಗಳ ಸಮೀಪ ಕಂಡು ಬಂದರೆ ಅವರಿಗೆ ಥಳಿಸಬೇಕು ಎಂದು ಜಾರ್ಖಂಡ್ನ ಬಿಜೆಪಿ ಶಾಸಕ ಕುಶ್ವಾಹ ಶಶಿ ಭೂಷಣ್ ಮೆಹ್ತಾ ಹೇಳಿರುವುದು ವಿವಾದಕ್ಕೀಡಾಗಿದೆ. ಅವರ ಈ ವಿವಾದಾಸ್ಪದ ಹೇಳಿಕೆಯಿರುವ ಭಾಷಣದ ತುಣುಕಿನ ವೀಡಿಯೋವೊಂದು ಸಾಮಾಜಿಕ ಜಾಲತಅಣದಲ್ಲಿ ಹರಿದಾಡುತ್ತಿದೆ.
ಮಂಗಳವಾರ ವಿಜಯ ದಶಮಿಯ ದಿನ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೆಹ್ತಾ ಈ ಮಾತುಗಳನ್ನು ಹೇಳಿದ್ದಾರೆಂದು ವರದಿಯಾಗಿದೆ. ಅವರು ಪಲಮವು ಜಿಲ್ಲೆಯ ಪಂಕಿ ಕ್ಷೇತ್ರದ ಶಾಸಕರಾಗಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಮುಸ್ಲಿಮರನ್ನು ನೇರವಾಗಿ ಉಲ್ಲೇಖಿಸಿಲ್ಲದೇ ಇದ್ದರೂ “ಈ ಜನರು” ಮೊದಲು ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅಡ್ಡಿಪಡಿಸುತ್ತಾರೆಂದು ಆರೋಪಿಸಿದರು.
ಗುರುವಾರ ಸಂಜೆ ತನಕ ಈ ದ್ವೇಷದ ಭಾಷಣ ಕುರಿತಂತೆ ಮೆಹ್ತಾ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ವೀಡಿಯೋವನ್ನು ಪರಾಮರ್ಶಿಸಲಾಗುತ್ತಿದೆ ಎಂದು ಪಲಮವು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್ ಹೇಳಿದರು.
ಈ ವಿಚಾರ ಕುರಿತಂತೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ವಿಪಕ್ಷ ಕಾಂಗ್ರೆಸ್ ಟೀಕಿಸಿದರೂ ಎಫ್ಐಆರ್ ಏಕೆ ದಾಖಲಾಗಿಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿಲ್ಲ.





