ಎಸ್ಐಆರ್ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದಿಂದ ಪ್ರತಿಭಟನೆ

PC : PTI
ಹೊಸದಿಲ್ಲಿ, ಜು. 24: ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರ ಪಟ್ಟಿಯನ್ನು ಪರಿಷ್ಕರಿಸುತ್ತಿರುವ ವಿರುದ್ಧ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಹಲವು ಸಂಸದರು ಸಂಸತ್ ಸಂಕೀರ್ಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಹಿಂಪಡೆಯುವಂತೆ ಹಾಗೂ ಈ ವಿಷಯದ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಸುವಂತೆ ಅವರು ಆಗ್ರಹಿಸಿದರು.
ದಿನದ ಕಲಾಪ ಆರಂಭವಾಗುವುದಕ್ಕಿಂತ ಮುನ್ನ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ, ಜೆಎಂಎಂ, ಆರ್ಜೆಡಿ ಹಾಗೂ ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳ ಉನ್ನತ ನಾಯಕರು ಹಾಗೂ ಸಂಸದರು ಸಂಸತ್ತಿನ ಮಕರ ದ್ವಾರದ ಹೊರಗೆ ಸೇರಿದರು. ಸರಕಾರ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಘೋಷಣೆಗಳನ್ನು ಕೂಗಿದರು.
ಸೋನಿಯಾ ಗಾಂಧಿ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ಸಮಾಜವಾದಿ ಪಕ್ಷದ ಝಿಯಾವುರ್ ರೆಹ್ಮಾನ್ ಬರ್ಕ್, ಟಿಎಂಸಿಯ ಕಿರ್ಟಿ ಅಝಾದ್ ಡಿಎಂಕೆಯ ರಾಜಾ ಸೇರಿದಂತೆ ಉನ್ನತ ನಾಯಕರು ಹಾಗೂ ಇತರರು ‘‘ಸಂವಿಧಾನ ಉಳಿಸಿ’’, ‘‘ಓಟ್ ಬಂಧಿ ನಿಲ್ಲಿಸಿ’’ ಎಂಬಂತಹ ಘೋಷಣೆಗಳನ್ನು ಕೂಗಿದರು.
ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಿಂತು ಸತತ ಮೂರನೇ ದಿನವೂ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮುಂದೆ ‘ಎಸ್ಐಆರ್-ಲೋಕತಂತ್ರ ಪರ್ವಾರ್’ ಎಂಬ ಬ್ಯಾನರ್ ಇತ್ತು.
ಪ್ರತಿಪಕ್ಷ ಎಸ್ಐಆರ್ ವಿರುದ್ಧ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ್ನಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸದಂತೆ ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗ ಇದನ್ನು ಆರಂಭಿಸಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.







