ಮಣಿಪುರದಿಂದ ಆರ್ಎಎಫ್ ಪಡೆಯನ್ನು ಹಿಂದಕ್ಕೆ ; ಕೇಂದ್ರ

Photo: ANI
ಹೊಸದಿಲ್ಲಿ : ಕೇಂದ್ರ ಸರಕಾರವು ಹಿಂಸಾಚಾರ ಪೀಡಿತ ಮಣಿಪುರದಿಂದ ಕ್ಷಿಪ್ರ ಕ್ರಿಯಾ ಪಡೆ (ಆರ್ಎಎಫ್)ಯನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳಲು ಪರಿಗಣಿಸುತ್ತಿದೆ. ಪ್ರತಿಭಟನೆ ಮತ್ತು ಕೋಮು ಘಟನೆಗಳು ಸೇರಿದಂತೆ ಜನಜಂಗುಳಿ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಲ್ಲಿ ತರಬೇತಿ ಪಡೆದಿರುವ ಆರ್ಎಎಫ್ ಅನ್ನು ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಸುವುದು ಸೂಕ್ತವಾಗದಿರಬಹುದು ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಸ್ತುತ ಆರ್ಎಫ್ನ 10 ಕಂಪನಿಗಳನ್ನು ಮಣಿಪುರದಲ್ಲಿ ನಿಯೋಜಿಸಲಾಗಿದ್ದು ,ಈ ಪೈಕಿ ಎಂಟು ಕಣಿವೆ ಜಿಲ್ಲೆಗಳಲ್ಲಿ ಮತ್ತು ಎರಡು ಗುಡ್ಡಗಾಡು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.
ಪೊಲೀಸರಲ್ಲದೇ,ಭಾರತೀಯ ಸೇನಾಪಡೆ ಮತ್ತು ಅರೆ ಮಿಲಿಟರಿ ಪಡೆಗಳ ಸುಮಾರು 36,000 ಸಿಬ್ಬಂದಿಗಳನ್ನು ಮಣಿಪುರದಲ್ಲಿ ನಿಯೋಜಿಸಲಾಗಿದೆ.
ಮೇ 3ರಂದು ರಾಜ್ಯದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ಈವರೆಗೆ ಕನಿಷ್ಠ 175 ಜನರು ಮೃತಪಟ್ಟಿದ್ದಾರೆ.





