ಸಂಪತ್ತು ಮರುಹಂಚಿಕೆಗೆ ಸಮೀಕ್ಷೆ: ರಾಹುಲ್ ಘೋಷಣೆ

Photo: facebook.com/rahulgandhi/
ಹೈದರಾಬಾದ್: ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪತ್ತು ಹೊಂದಿದ್ದಾರೆ ಎನ್ನುವುದನ್ನು ದೃಢಪಡಿಸಲು ವಿತ್ತೀಯ ಮತ್ತು ಸಾಂಸ್ಥಿಕ ಸಮೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಿದೆ; ಬಳಿಕ ಇದನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಘೋಷಿಸಿದ್ದಾರೆ.
ಪ್ರತಿ ವಲಯದಲ್ಲೂ ಎಲ್ಲ ಸಮುದಾಯಗಳ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಪಕ್ಷದ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಅವರು, "ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಹಾಗೂ ಇತರ ಜಾತಿಗಳ ನಿಖರವಾದ ಜನಸಂಖ್ಯೆ ತಿಳಿಯಲು ಮೊದಲು ನಾವು ಜಾತಿ ಗಣತಿ ಕೈಗೊಳ್ಳುತ್ತೇವೆ. ಆ ಬಳಿಕ ಭಾರತದಲ್ಲಿ ಸಂಪತ್ತಿನ ಮರುಹಂಚಿಕೆಗೆ ಐತಿಹಾಸಿಕ ಕ್ರಮ ಕೈಗೊಳ್ಳುತ್ತೇವೆ. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳನ್ನು ನೀಡುತ್ತೇವೆ" ಎಂದು ವಿವರಿಸಿದರು.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 90ರಷ್ಟು ಮಂದಿ ಹಿಂದುಳಿದವರು, ಎಸ್ಸಿ, ಎಸ್ಟಿಗಳು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳಿದ್ದಾರೆ. ಆದರೆ ಸರ್ಕಾರಿ ಉದ್ಯೋಗ, ಇತರ ದೊಡ್ಡ ಕಂಪನಿಗಳು ಮತ್ತು ಇತರ ವಲಯಗಳಲ್ಲಿ ಇವರ ಪಾಲು ನಗಣ್ಯ. ಶೇಕಡ 90ರಷ್ಟು ಮಂದಿಗೆ ದೇಶದ ಆಡಳಿತ ನಿರ್ಧಾರ ಕೈಗೊಳ್ಳುವ ಅವಕಾಶ ಇಸಲ್ಲ. ದೇಶವನ್ನು ಆಳುವ 90 ಐಎಎಸ್ ಅಧಿಕಾರಿಗಳ ಪೈಕಿ ಕೇವಲ ಮೂವರು ಹಿಂದುಳಿದವರು, ಒಬ್ಬ ಆದಿವಾಸಿ ಮತ್ತು ಮೂವರು ದಲಿತರು" ಎಂದು ಅಂಕಿ ಅಂಶ ನೀಡಿದರು.
ಒಟ್ಟು 100 ರೂಪಾಯಿ ಖರ್ಚು ಮಾಡುವುದಾದಲ್ಲಿ, ಆ ಪೈಕಿ ಹಿಂದುಳಿದ ವರ್ಗಗಳ ಅಧಿಕಾರಿಗಳು ಒಳಗೊಳ್ಳುವುದು ಕೇವಲ 6 ರೂಪಾಯಿ ಖರ್ಚು ಮಾಡುವ ನಿರ್ಧಾರದಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.







