ರಾಜಸ್ಥಾನ | ಕಾರು-ಕೈಗಾಡಿ ಢಿಕ್ಕಿ: ಗುಂಪಿನಿಂದ ಥಳಿಸಿ ಯುವಕನ ಹತ್ಯೆ

Photo: India Today
ಜೈಪುರ: ಕಾರು ಹಾಗೂ ಕೈಗಾಡಿ ನಡುವೆ ಸಣ್ಣ ಢಿಕ್ಕಿ ಸಂಭವಿಸಿದ ಬಳಿಕ 8-10 ಜನರ ಗುಂಪು ಯುವಕನೋರ್ವನನ್ನು ಕ್ರೂರವಾಗಿ ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಸೀತಾರಾಮ್, ಸಿಕಂದರ್, ದಿಲ್ಕುಶ್ ಹಾಗೂ ದೀಪಕ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗೆ ಜಹಾಝ್ಪುರ ಪ್ರದೇಶಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮನೆ ತಲುಪಲು ಸ್ಪಲ್ಲವೇ ದೂರ ಇದ್ದಾಗ ಅವರ ಕಾರು ಕೈಗಾಡಿಗೆ ತಾಗಿತು. ಇದರಿಂದ ವಾಗ್ವಾದ ಭುಗಿಲೆದ್ದಿತು. ಈ ಸಂದರ್ಭ ಕೈಗಾಡಿಯ ನಿರ್ವಾಹಕ ತನ್ನ 8ರಿಂದ 10 ಮಂದಿ ಸಹವರ್ತಿಗಳೊಂದಿಗೆ ಸೀತಾರಾಮನನ್ನು ಕಾರಿನ ಕಿಟಕಿಯ ಮೂಲಕ ಹೊರಗೆಳೆದ. ಅನಂತರ ಗುಂಪು ಆತನಿಗೆ ನಿರ್ದಯವಾಗಿ ಥಳಿಸಿತು.
ಅವರ ಮೂವರು ಸಹಚರರು ಮಧ್ಯಪ್ರವೇಶಿಸುವ ಪ್ರಯತ್ನದ ಹೊರತಾಗಿಯೂ ದಾಳಿಕೋರರು ಸೀತಾರಾಮ್ ಗೆ ಥಳಿಸುವುದನ್ನು ನಿಲ್ಲಿಸಲಿಲ್ಲ. ಗಂಭೀರ ಗಾಯಗೊಂಡ ಸೀತಾರಾಮ (25) ಸ್ಥಳದಲ್ಲೇ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಕೂಡಲೇ ಪೊಲೀಸರು ಕಾರಿನಲ್ಲಿದ್ದ ಇತರ ಮೂವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗೆ ಬಂದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ. ಸಾವನ್ನಪ್ಪಿದ ಯುವಕನ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿ ಪೊಲೀಸರು ಆ ಪ್ರದೇಶದ ನಿವಾಸಿಯಾಗಿರುವ ಆರೋಪಿ ಶರೀಫ್ ನನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡ ಇತರ ಶಂಕಿತರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.