ರಾಜಸ್ಥಾನ | ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿಅವಘಡ : ಬಾಲ ನಟ ವೀರ್ ಶರ್ಮಾ, ಸಹೋದರ ಮೃತ್ಯು

PC : NDTV
ಹೊಸದಿಲ್ಲಿ, ಸೆ. 28: ರಾಜಸ್ಥಾನ ಕೋಟಾದ ಅನಂತಪುರದ ದೀಪ್ ಶ್ರೀ ಬಹು ಮಹಡಿಯ ಕಟ್ಟಡದಲ್ಲಿ ಶನಿವಾರ ತಡ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಮೃತಪಟ್ಟ ಬಾಲಕರನ್ನು ಬಾಲ ನಟ ವೀರ್ ಶರ್ಮಾ (10) ಹಾಗೂ ಆತನ ಸಹೋದರ ಶೌರ್ಯ ಶರ್ಮಾ (15) ಎಂದು ಗುರುತಿಸಲಾಗಿದೆ. ವೀರ್ ಶರ್ಮಾ ‘ವೀರ ಹನುಮಾನ್’ ಟಿ.ವಿ. ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ಮಾಡಿದ್ದ.
ಇವರಿಬ್ಬರು ಬಾಲಿವುಡ್ ನಟಿ ರೀಟಾ ಶರ್ಮಾ ಹಾಗೂ ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಜಿತೇಂದ್ರ ಶರ್ಮಾ ಅವರ ಮಕ್ಕಳು.
ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಫ್ಟ್ಯಾಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅಲ್ಲಿ ಇಬ್ಬರು ಮಕ್ಕಳು ಮಾತ್ರ ಇದ್ದರು. ಮಕ್ಕಳು ದಟ್ಟ ಹೊಗೆಯಿಂದ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡರು. ಅಪಾರ್ಟ್ಮೆಂಟ್ನಿಂದ ಹೊಗೆ ಹೊರ ಸೂಸುತ್ತಿರುವುದನ್ನು ಗಮನಿಸಿದ ನೆರೆ ಹೊರೆಯವರು ಧಾವಿಸಿ ಫ್ಯಾಟ್ನ ಬಾಗಿಲು ಮುರಿದು ಮಕ್ಕಳನ್ನು ಕೂಡಲೇ ಅಸ್ಪತ್ರೆಗೆ ಕರೆದೊಯ್ದರು. ಆದರೆ, ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಅವಘಡ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.







