ಪಾಕಿಸ್ತಾನದಿಂದ ವಾಯು ದಾಳಿ ಸಾಧ್ಯತೆ: ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ

Photo credit: PTI
ಜೈಪುರ: ಪಾಕಿಸ್ತಾನವು ವಾಯು ದಾಳಿ ನಡೆಸುವ ಬೆದರಿಕೆಯ ಹಿನ್ನೆಲೆಯಲ್ಲಿ ಶನಿವಾರ ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರನ್ನು ಎಚ್ಚರಿಸಲು ಬಾರ್ಮರ್ನಲ್ಲಿ ಬಾಂಬ್ ದಾಳಿ ಎಚ್ಚರಿಕೆಯ ಸೈರನ್ಗಳನ್ನು ಮೊಳಗಿಸಲಾಗಿದೆ. ಪೊಲೀಸರು ಗಸ್ತು ಓಡಾಟವನ್ನು ತೀವ್ರಗೊಳಿಸಿದ್ದು, ವಾಯು ದಾಳಿ ಸಾಧ್ಯತೆಯ ಬಗ್ಗೆ ಜನರನ್ನು ಎಚ್ಚರಿಸಲು ಪೊಲೀಸ್ ವಾಹನಗಳು ಹಾಗೂ ಸಾರ್ವಜನಿಕ ಸಂವಾದ ವ್ಯವಸ್ಥೆಗಳ ಮೂಲಕ ಪ್ರಕಟಣೆಗಳನ್ನು ಮಾಡಲಾಗುತ್ತಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಬಾರ್ಮರ್ ಹಾಗೂ ಜೈಸ್ಮಲೇರ್ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಹೈ ಅಲರ್ಟ್ ಘೋಷಿಸಲಾಗಿರುವ ಬಿಕಾನೇರ್ ಹಾಗೂ ಶ್ರೀ ಗಂಗಾನಗರ್ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ.
ಶುಕ್ರವಾರ ರಾತ್ರಿ ಬಾರ್ಮರ್ ಹಾಗೂ ಜೈಸ್ಮಲೇರ್ ಜಿಲ್ಲೆಗಳಲ್ಲಿ ಹಲವು ಬಾರಿ ಡ್ರೋನ್ ದಾಳಿ ನಡೆಸಲು ಪಾಕಿಸ್ತಾನ ಯತ್ನಿಸಿತು. ಆದರೆ, ಭಾರತೀಯ ರಕ್ಷಣಾ ಪಡೆಗಳು ಈ ಡ್ರೋನ್ಗಳನ್ನು ಆಕಾಶ ಮಾರ್ಗಮಧ್ಯದಲ್ಲೇ ಹೊಡೆದುರುಳಿಸಿದವು.
ಶನಿವಾರ ಬೆಳಗ್ಗೆ ಬಾರ್ಮರ್ ಹಾಗೂ ಜೈಸ್ಮಲೇರ್ನ ವಿವಿಧ ಪ್ರದೇಶಗಳಲ್ಲಿ ಡ್ರೋನ್ಗಳ ಅವಶೇಷಗಳು ಪತ್ತೆಯಾಗಿವೆ.