ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಬೆಂಗಳೂರು, ಬಳ್ಳಾರಿಯಲ್ಲಿ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ

Photo Credit : PTI
ಪಟ್ಟಣಂತಿಟ್ಟ: ಶಬರಿಮಲೆ ದೇವಸ್ಥಾನದಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟ್ಟಿಯ ಬೆಂಗಳೂರಿನಲ್ಲಿರುವ ಅಪಾರ್ಟ್ ಮೆಂಟ್ ಹಾಗೂ ಬಳ್ಳಾರಿಯ ಆಭರಣ ಅಂಗಡಿಯೊಂದರಲ್ಲಿ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ಶುಕ್ರವಾರ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟ್ಟಿಯನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.
ಶಬರಿಮಲೆ ದೇವಸ್ಥಾನದ ಶ್ರೀಕೋವಿಲ್ ದ್ವಾರದ ಪ್ರಭಾವಳಿಯ ಚಿನ್ನದ ಲೇಪನಕ್ಕೆ ಹಣಕಾಸು ನೆರವು ಒದಗಿಸಿದ್ದ ಗೋವರ್ಧನ್ ಎಂಬ ವ್ಯಕ್ತಿಯ ಮಾಲಕತ್ವದ ಆಭರಣಗಳ ಮಳಿಗೆಯಲ್ಲಿ ವಿಶೇಷ ತನಿಖಾ ತಂಡ ಶೋಧ ಕಾರ್ಯ ನಡೆಸಿತು ಎಂದು ಮೂಲಗಳು ತಿಳಿಸಿವೆ. ಆಭರಣದ ಮಳಿಗೆಯಿಂದ ಹಲವಾರು ಚಿನ್ನದ ತುಂಡುಗಳನ್ನು ವಿಶೇಷ ತನಿಖಾ ತಂಡ ವಶಪಡಿಸಿಕೊಂಡಿದೆ. ಆದರೆ, ವಶಪಡಿಸಿಕೊಳ್ಳಲಾಗಿರುವ ಆ ಚಿನ್ನದ ತುಂಡುಗಳು 2019ರಲ್ಲಿ ಎಲೆಕ್ಟ್ರೋಪ್ಲೇಟಿಂಗ್ ಗಾಗಿ ತೆಗೆದುಕೊಂಡು ಹೋಗಿದ್ದ ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪಿತ ತಾಮ್ರದ ಪ್ರಭಾವಳಿಯಿಂದ ತೆಗೆಯಲಾಗಿರುವ ಚಿನ್ನದಿಂದ ಮಾಡಲಾಗಿರುವ ತುಂಡುಗಳೇ ಎಂಬುದಿನ್ನೂ ದೃಢಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ ಈಗಾಗಲೇ ಗೋವರ್ಧನ್ ಹೇಳಿಕೆಯನ್ನು ವಿಶೇಷ ತನಿಖಾ ತಂಡ ದಾಖಲಿಸಿಕೊಂಡಿದೆ.
ಈ ನಡುವೆ, ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಉನ್ನಿಕೃಷ್ಣನ್ ಪೋಟ್ಟಿಯ ಅಪಾರ್ಟ್ ಮೆಂಟ್ ತಪಾಸಣೆಯನ್ನೂ ನಡೆಸಿದ ವಿಶೇಷ ತನಿಖಾ ತಂಡ, ಬಳಿಕ, ಆತ ಈ ಮುನ್ನ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದ ಅಯ್ಯಪ್ಪ ದೇವಾಲಯಕ್ಕೂ ಭೇಟಿ ನೀಡಿತು ಎಂದು ಹೇಳಲಾಗಿದೆ.





