ಮಧ್ಯಪ್ರದೇಶ | ಒಳಚರಂಡಿ ಸ್ವಚ್ಛತೆ ವೇಳೆ ಕಾರ್ಮಿಕ ಮೃತ್ಯು, ಇಬ್ಬರು ಗಂಭೀರ

ಸಾಂದರ್ಭಿಕ ಚಿತ್ರ | PC : Meta AI
ಸತ್ನಾ,ಸೆ.25: ಭೂಗತ ಒಳಚರಂಡಿ ಮಾರ್ಗವನ್ನು ಸ್ವಚ್ಛಗೊಳಿಸುತ್ತಿದ್ದಾಗ ವಿಷಾನಿಲವನ್ನು ಸೇವಿಸಿ ಓರ್ವ ನೈರ್ಮಲ್ಯ ಕಾರ್ಮಿಕ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಪ್ರದೇಶದ ಸತ್ನಾದಲ್ಲಿ ಸಂಭವಿಸಿದ್ದು, ಇತರ ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಕೃಪಾಳಪುರ ಪ್ರದೇಶದ ತ್ರಿವೇಣಿ ಪ್ಯಾಲೇಸ್ ಬಳಿ ಈ ಘಟನೆ ನಡೆದಿದೆ ಎಂದು ಪೋಲಿಸರು ಸುದ್ದಿಗಾರರಿಗೆ ತಿಳಿಸಿದರು.
ಸ್ವಚ್ಛತೆ ಕಾರ್ಯಕ್ಕಾಗಿ ಒಳಚರಂಡಿಗಿಳಿದಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವಿಸಿ ಪ್ರಜ್ಞಾಹೀನರಾಗಿದ್ದರು. ಅವರ ನೆರವಿಗೆ ಧಾವಿಸಿದ್ದ ಸ್ಥಳೀಯರು ಒಳಚರಂಡಿಯನ್ನು ಪ್ರವೇಶಿಸಿ ಹಗ್ಗದ ನೆರವಿನಿಂದ ಅವರನ್ನು ಹೊರಕ್ಕೆ ತೆಗೆದಿದ್ದರು. ಮೂವರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಮಿತ್ ಕುಮಾರ್ ಎಂಬಾತ ಮೃತಪಟ್ಟಿದ್ದು, ಇತರ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೋಲಿಸರು ಹೇಳಿದರು.
ಸ್ವಚ್ಛತಾ ಕೆಲಸವನ್ನು ವಹಿಸಿಕೊಂಡಿದ್ದ ಒಳಚರಂಡಿ ಕಂಪೆನಿಯ ವಿರುದ್ಧ ದೂರು ದಾಖಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದರು.





