17 ಸಂಸದರಿಗೆ ‘ಸಂಸದ ರತ್ನ ಪ್ರಶಸ್ತಿ’ ಬಿಜೆಪಿಯ ನಿಶಿಕಾಂತ್ ದುಬೆಗೂ ಸನ್ಮಾನ

ನಿಶಿಕಾಂತ್ ದುಬೆ | PC : Sansad TV
ಹೊಸದಿಲ್ಲಿ: ಬರ್ತುೃಹರಿ ಮೆಹ್ತಾಬ್ ಹಾಗೂ ರವಿಕಿಶನ್ ಸೇರಿದಂತೆ ಸಂಸತ್ತಿನ 17 ಸದಸ್ಯರು ಹಾಗೂ ಎರಡು ಸಂಸದೀಯ ಸ್ಥಾಯಿ ಸಮಿತಿಗಳು ‘ಸಂಸದ್ ರತ್ನ ಪ್ರಶಸ್ತಿ-2025’ಕ್ಕೆ ಆಯ್ಕೆಯಾಗಿವೆ.
‘ಪ್ರೈಮ್ ಪಾಯಿಂಟ್ ಫೌಂಡೇಶನ್’ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಸಂಸತ್ತಿಗೆ ನೀಡಿದ ಕೊಡುಗೆಗಾಗಿ ಸಂಸದರಿಗೆ ನೀಡಲಾಗುತ್ತದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್ಸಿಬಿಸಿ)ದ ಅಧ್ಯಕ್ಷ ಹಂಸರಾಜ್ ಅಹಿರ್ ಅವರ ಅಧ್ಯಕ್ಷತೆಯ ಜ್ಯೂರಿ ಸಮಿತಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.
ಮಹ್ತಾಬ್, ಸುಪ್ರಿಯಾ ಸುಳೆ (ಎನ್ಸಿಪಿ-ಎಸ್ಪಿ), ಎನ್.ಕೆ. ಪ್ರೇಮಚಂದ್ರನ್ (ಆರ್ಎಸ್ಪಿ) ಹಾಗೂ ಶ್ರೀರಂಗ್ ಅಪ್ಪಾ ಬಾರ್ನೆ ಅವರು ‘‘ಸಂಸದೀಯ ಪ್ರಜಾಪ್ರಭುತ್ವಕ್ಕೆ ಅತ್ಯುತ್ತಮ ಹಾಗೂ ನಿರಂತರ ಕೊಡುಗೆ’’ಗಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಂಸತ್ತಿನ ಈ ನಾಲ್ವರು ಸದಸ್ಯರು 16ನೇ ಹಾಗೂ 17ನೇ ಲೋಕಸಭೆಯ ಸಂದರ್ಭ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ. ಅಲ್ಲದೆ, ತಮ್ಮ ಈಗಿನ ಅವಧಿಯಲ್ಲಿ ಕೂಡ ಉತ್ತಮ ನಿರ್ವಹಣೆ ತೋರಿಸುತ್ತಿದ್ದಾರೆ ಎಂದು ‘ಪ್ರೈಮ್ ಪಾಯಿಂಟ್ ಪೌಂಡೇಶನ್’ನ ಹೇಳಿಕೆ ತಿಳಿಸಿದೆ.
ಪ್ರಶಸ್ತಿಗೆ ಆಯ್ಕೆಯಾದ ಇತರರೆಂದರೆ ಸ್ಮಿತಾ ವಾಘ್ (ಬಿಜೆಪಿ), ಅರವಿಂದ ಸಾವಂತ್ (ಶಿವಸೇನಾ-ಯುಬಿಟಿ), ನರೇಶ್ ಗಣಪತ್ ಮ್ಹಾಸ್ಕೆ (ಶಿವಸೇನಾ), ವರ್ಷಾ ಗಾಯಕ್ವಾಡ್ (ಕಾಂಗ್ರೆಸ್), ಮೇಧಾ ಕುಲಕರ್ಣಿ (ಬಿಜೆಪಿ), ಪ್ರವೀಣ್ ಪಟೇಲ್ (ಬಿಜೆಪಿ), ರವಿ ಕಿಶನ್ (ಬಿಜೆಪಿ), ನಿಶಿಕಾಂತ್ ದುಬೆ (ಬಿಜೆಪಿ), ಬಿದ್ಯುತ್ ಬರಾನ್ ಮಹತೊ (ಬಿಜೆಪಿ), ಪಿ.ಪಿ. ಚೌಧರಿ (ಬಿಜೆಪಿ), ಮದನ್ ರಾಥೋಡ್ (ಬಿಜೆಪಿ), ಸಿ.ಎನ್. ಅಣ್ಣಾದುರೈ (ಡಿಎಂಕೆ) ಹಾಗೂ ದಿಲೀಪ್ ಸೈಕಿಯಾ (ಬಿಜೆಪಿ).
ಸಂಸತ್ತಿನಲ್ಲಿ ಮಂಡಿಸಿದ ವರದಿಗಳ ಆಧಾರದಲ್ಲಿ ತಮ್ಮ ವಿಶೇಷ ನಿರ್ವಹಣೆಗಾಗಿ ಹಣಕಾಸು ಸ್ಥಾಯಿ ಸಮಿತಿ ಹಾಗೂ ಕೃಷಿ ಸ್ಥಾಯಿ ಸಮಿತಿಯನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರು ಮಹ್ತಾಬ್. ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಕಾಂಗ್ರೆಸ್ ನ ಚರಣ್ಜಿತ್ ಸಿಂಗ್ ಚನ್ನಿ.







