ʼನಕಲಿʼ ಎನ್ಕೌಂಟರ್ ಪ್ರಕರಣ| ಮಾವೋವಾದಿ ನಾಯಕ ಕಥಾ ರಾಮಚಂದ್ರ ರೆಡ್ಡಿ ಅಂತ್ಯಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ: ಮೃತದೇಹ ಸಂರಕ್ಷಿಸುವಂತೆ ನಿರ್ದೇಶನ

Photo credit: PTI
ಹೊಸದಿಲ್ಲಿ : ನಾರಾಯಣಪುರ ಜಿಲ್ಲೆಯಲ್ಲಿ ನಡೆದ ʼನಕಲಿʼ ಎನ್ಕೌಂಟರ್ನಲ್ಲಿ ಮೃತಪಟ್ಟ ಮಾವೋವಾದಿ ಉನ್ನತ ಕಮಾಂಡರ್ ಕಥಾ ರಾಮಚಂದ್ರ ರೆಡ್ಡಿ ಮೃತದೇಹವನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಛತ್ತೀಸ್ಗಢ ಪೊಲೀಸರಿಗೆ ನಿರ್ದೇಶನ ನೀಡಿದೆ.
ಛತ್ತೀಸ್ಗಢ ಹೈಕೋರ್ಟ್ ನಕಲಿ ಎನ್ಕೌಂಟರ್ ಮತ್ತು ಚಿತ್ರಹಿಂಸೆ ಆರೋಪದ ಅರ್ಜಿ ಕುರಿತು ವಿಚಾರಣೆ ನಡೆಸಿ ನಿರ್ಧಾರ ತೆಗೆದುಕೊಳ್ಳುವವರೆಗೆ ಮೃತದೇಹವನ್ನು ದಹನ ಮಾಡಬಾರದು ಅಥವಾ ಹೂಳಬಾರದು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಜಿ ಮಸಿಹ್ ಅವರ ಪೀಠವು ಹೇಳಿದೆ.
ಅರ್ಜಿದಾರ ರಾಜ ಚಂದ್ರ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ರಾಮಚಂದ್ರ ರೆಡ್ಡಿ ಅವರನ್ನು ಚಿತ್ರಹಿಂಸೆ ನೀಡಿ ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ ಮತ್ತು ಪೊಲೀಸರು ಮೃತದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ರಾಜ್ಯ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎನ್ಕೌಂಟರ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಅರ್ಜಿದಾರರ ತಂದೆಗೆ 7 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಅದೇ ಎನ್ಕೌಂಟರ್ನಲ್ಲಿ ಮೃತಪಟ್ಟ ಓರ್ವ ಮಾವೋವಾದಿಯ ಮೃತದೇಹವನ್ನು ಈಗಾಗಲೇ ಅವರ ಕುಟುಂಬಕ್ಕೆ ನೀಡಿ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಅರ್ಜಿದಾರರ ತಂದೆಯ ಮೃತದೇಹವು ಆಸ್ಪತ್ರೆಯಲ್ಲಿಯೇ ಇದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.







