ನಾಳೆ ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಬಿಡುಗಡೆ ಪ್ರಶ್ನಿಸಿದ್ದ ಅರ್ಜಿ ತೀರ್ಪು
![ನಾಳೆ ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಬಿಡುಗಡೆ ಪ್ರಶ್ನಿಸಿದ್ದ ಅರ್ಜಿ ತೀರ್ಪು ನಾಳೆ ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಬಿಡುಗಡೆ ಪ್ರಶ್ನಿಸಿದ್ದ ಅರ್ಜಿ ತೀರ್ಪು](https://www.varthabharati.in/h-upload/2024/01/07/1230245-1229645-sc-sixteennine.webp)
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: 2002ರ ಗುಜರಾತ್ ಗಲಭೆಗಳ ಸಂದರ್ಭ ನಡೆದ ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಇತರ ಹಲವು ಹೇಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿ ದೋಷಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ವಲ್ ಭುಯನ್ ಅವರನ್ನು ಒಳಗೊಂಡ ಪೀಠ ಬಿಲ್ಕಿಸ್ ಬಾನು ಹಾಗೂ ಇತರರು ಸಲ್ಲಿಸಿದ ಅರ್ಜಿಯ ಮೇಲಿನ ಆದೇಶವನ್ನು ಅಕ್ಟೋಬರ್ 12ರಂದು ಕಾಯ್ದಿರಿಸಿತ್ತು. ಆದುದರಿಂದ ಪ್ರಕರಣದ ಕುರಿತಂತೆ ಪೀಠ ಸೋಮವಾರ ತೀರ್ಪು ಘೋಷಿಸಲಿದೆ.
2022 ಆಗಸ್ಟ್ ನಲ್ಲಿ ದೋಷಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡ ಪ್ರಕ್ರಿಯೆಗಳನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.
2002ರ ಗುಜರಾತ್ ಗಲಭೆಯ ಸಂದರ್ಭ ರಕ್ಷಿಸಿಕೊಳ್ಳಲು ಕುಟುಂಬದೊಂದಿಗೆ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ಸಾಮೂಹಿಕವಾಗಿ ಅತ್ಯಾಚಾರಕ್ಕೆ ಒಳಗಾದ ಸಂದರ್ಭ ಬಾನುವಿಗೆ 21 ವರ್ಷ ವಯಸ್ಸು. ಅಲ್ಲದೆ, ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಆರೋಪಿಗಳು ಅವರ ಮೂರು ವರ್ಷದ ಪುತ್ರಿ ಸೇರಿದಂತೆ ಅವರ ಕುಟುಂಬದ 7 ಮಂದಿಯನ್ನು ಹತ್ಯೆಗೈದಿದ್ದರು.
ಈ ಪ್ರಕರಣದ ವಿಚಾರಣೆ ಗುಜರಾತ್ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು. ಸಿಬಿಐ ಈ ಪ್ರಕರಣದ ತನಿಖೆ ನಡೆಸಿತ್ತು. 2008ರಲ್ಲಿ ಮುಂಬೈಯ ವಿಶೇಷ ನ್ಯಾಯಾಲಯ 11 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಬಾಂಬೆ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ 2017ರಲ್ಲಿ ಎತ್ತಿ ಹಿಡಿದಿತ್ತು.