ಸಿಂಗಾಪುರದಲ್ಲಿ ‘ಶಾಂಗ್ರಿ-ಲಾ ಮಾತುಕತೆ’: ಭಾರತ, ಪಾಕ್ ಸೇನಾ ಮುಖ್ಯಸ್ಥರಿಂದ ಪರಸ್ಪರರಿಗೆ ಎಚ್ಚರಿಕೆ

PC : AFP \ livemint.com
ಹೊಸದಿಲ್ಲಿ: ಸಿಂಗಾಪುರದಲ್ಲಿ ನಡೆದ ‘ಶಾಂಗ್ರಿ-ಲಾ ಮಾತುಕತೆ’ಯಲ್ಲಿ, ಭಾರತೀಯ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮತ್ತು ಪಾಕಿಸ್ತಾನಿ ಸೇನಾಪಡೆಯ ಮೂರೂ ವಿಭಾಗಗಳ ಮುಖ್ಯಸ್ಥ ಜನರಲ್ ಸಾಹಿರ್ ಶಮ್ಶದ್ ಮಿರ್ಝಾ, ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪರಸ್ಪರ ಎಚ್ಚರಿಕೆಗಳನ್ನು ವಿನಿಮಯಗೊಳಿಸಿದ್ದಾರೆ.
‘ಶಾಂಗ್ರಿ-ಲಾ’ ಮಾತುಕತೆಯು ಏಶ್ಯಾದ ಮಹತ್ವದ ರಕ್ಷಣಾ ಶೃಂಗ ಸಮ್ಮೇಳನವಾಗಿದೆ. ಸಿಂಗಾಪುರದ ‘ಶಾಂಗ್ರಿ-ಲಾ’ ಹೊಟೇಲ್ನಲ್ಲಿ ನಡೆಯುವ ಮಾತುಕತೆಯಲ್ಲಿ ಏಶ್ಯಾದ ದೇಶಗಳ ಉನ್ನತ ರಾಜಕೀಯ ಮತ್ತು ಸೇನಾ ನಾಯಕರು ಪಾಲ್ಗೊಂಡು ವಲಯದ ತುರ್ತಿನ ಭದ್ರತಾ ಸವಾಲುಗಳ ಬಗ್ಗೆ ಚರ್ಚೆ ಮಾಡುತ್ತಾರೆ. 2025ರ ಇಂಥ ಸಭೆ ಶುಕ್ರವಾರದಿಂದ ರವಿವಾರದವರೆಗೆ ನಡೆಯಿತು.
‘ಶಾಂಗ್ರಿ-ಲಾ ಮಾತುಕತೆ’ಯ ಬಗ್ಗೆ ಮಾತನಾಡಿದ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಶನ್ ಸಿಂಧೂರ’ ಬಗ್ಗೆ ಪ್ರಸ್ತಾಪಿಸುತ್ತಾ, ‘‘ಭಾರತವು ಏನು ಮಾಡಿದೆಯೆಂದರೆ, ರಾಜಕೀಯವಾಗಿ ಭಯೋತ್ಪಾದನೆ ವಿರುದ್ಧದ ಅಸಹಿಷ್ಣುತೆ ವಿಷಯದಲ್ಲಿ ಹೊಸ ಕೆಂಪು ಗೆರೆಯನ್ನು ಎಳೆದಿದೆ’’ ಎಂದು ಹೇಳಿದರು.
‘‘ಆಪರೇಶನ್ ಸಿಂಧೂರ ಕಾರ್ಯಾಚರಣೆಯು ಪ್ರಧಾನವಾಗಿ ಸೇನಾ ವ್ಯಾಪ್ತಿಗೆ ಸೇರಿದ್ದಾಗಿದೆ. ಅದು ನಮ್ಮ ವೈರಿಗೆ ಕೆಲವು ಪಾಠಗಳನ್ನು ಕಲಿಸುವ ಉದ್ದೇಶವನ್ನು ಹೊಂದಿತ್ತು. ಇದು ಭಾರತದ ಸಹನೆಯ ಕೊನೆ ಎನ್ನುವುದನ್ನು ಅವರು ತಿಳಿದುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ’’ ಎಂಬುದಾಗಿ ಜನರಲ್ ಅನಿಲ್ ಚೌಹಾಣ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
‘‘ಭಯೋತ್ಪಾದನೆ ಎಂಬ ಈ ಛಾಯಾ ಸಮರವನ್ನು ನಾವು ಎರಡು ದಶಕಗಳಿಂದ ಎದುರಿಸುತ್ತಿದ್ದೇವೆ. ನಾವು ಇದರಲ್ಲಿ ತುಂಬಾ ಜನರನ್ನು ಕಳೆದುಕೊಂಡಿದ್ದೇವೆ. ಅದಕ್ಕೆ ನಾವೊಂದು ಕೊನೆ ಹಾಕಲು ಬಯಸಿದ್ದೇವೆ’’ ಎಂದು ಸಿಡಿಎಸ್ ಹೇಳಿದರು.
ಪಾಕಿಸ್ತಾನದ ಜನರಲ್ ಸಾಹಿರ್ ಶಮ್ಶದ್ ಮಿರ್ಝಾ ತನ್ನ ಭಾಷಣದಲ್ಲಿ, ಸಂಘರ್ಷವನ್ನು ನಿಭಾಯಿಸುವುದಕ್ಕಿಂತಲೂ ಸಂಘರ್ಷವನ್ನು ಪರಿಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.







