ವಿಧಾನಸಭೆ ಚುನಾವಣೆಗೂ ಮುನ್ನ ಮಧ್ಯಪ್ರದೇಶ ಬಿಜೆಪಿಗೆ ಆಘಾತ; ಶಾಸಕ ವಿರೇಂದ್ರ ರಘುವಂಶಿ ರಾಜೀನಾಮೆ

Virendra Raghuwanshi | Facebook/Virendra Raghuwanshi
ಶಿವಪುರಿ (ಮ.ಪ್ರ): ಕೊಲಾರಾಸ್ ಶಾಸಕ ವಿರೇಂದ್ರ ರಘುವಂಶಿ ಬಿಜೆಪಿಗೆ ತನ್ನ ರಾಜೀನಾಮೆಯನ್ನು ಗುರುವಾರ ಘೋಷಿಸಿದ್ದಾರೆ.
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನ ಸಭೆ ಚುನಾವಣೆ ನಡೆಯುವುದಕ್ಕಿಂತ ಮುನ್ನ ಈ ಬೆಳವಣಿಗೆ ನಡೆದಿದೆ.
ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ವಿಷ್ಣು ದತ್ತ ಶರ್ಮಾ ಅವರಿಗೆ ಬರೆದ ಹಾಗೂ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರದಲ್ಲಿ ಶಿವಪುರ ಜಿಲ್ಲೆಯ ಕೊಲಾರಾಸ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ರಘುವಂಶಿ, ತನ್ನ ನೋವಿನ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಮುಖ್ಯಮಂತ್ರಿ (ಶಿವರಾಜ್ ಸಿಂಗ್ ಚೌಹಾಣ್) ಹಾಗೂ ಉನ್ನತ ನಾಯಕರಿಗೆ ಮಾಹಿತಿ ನೀಡಿದ್ದೇನೆ ಎಂದರು.
‘‘ಆದರೆ, ಅವರು ಯಾರೂ ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಗ್ವಾಲಿಯರ್-ಚಂಬಲ್ ವಿಭಾಗದಲ್ಲಿ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಪಕ್ಷಕ್ಕೆ ಬದ್ಧರಾಗಿ ದುಡಿದಿದ್ದೇವೆ. ಆದರೆ, ಹೊಸತಾಗಿ ಆಗಮಿಸಿದ ಬಿಜೆಪಿ ಸದಸ್ಯರು ನನ್ನಂತಹ ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಕೊಲಾರಾಸ್ ಕ್ಷೇತ್ರದಲ್ಲಿ ತಾನು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಲು, ತನಗೆ ಹಾಗೂ ತನ್ನ ಕಾರ್ಯಕರ್ತರಿಗೆ ಕಿರಕುಳ ನೀಡಲು ಭ್ರಷ್ಟ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ರಘುವಂಶಿ ಆರೋಪಿಸಿದ್ದಾರೆ.







