ಮಾನ್ಸಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ: ಸಿಧು ಮೂಸೆವಾಲಾರ ತಂದೆ

ಬಾಲ್ಕುರ್ ಸಿಂಗ್ | Credit: PTI File Photo
ಬಠಿಂಡಾ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ವೇಳೆ ತಾನು ಮಾನ್ಸಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ ಎಂದು ಮೃತ ಗಾಯಕ ಸಿಧು ಮೂಸೆವಾಲಾರ ತಂದೆ ಬಾಲ್ಕುರ್ ಸಿಂಗ್ ಹೇಳಿದ್ದಾರೆ.
2022ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸಿಧು ಮೂಸೆವಾಲಾ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು.
ಮಾನ್ಸಾದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಬಾಲ್ಕುರ್ ಸಿಂಗ್, ನಾನು ನನ್ನ ಪುತ್ರನನ್ನು ಕಳೆದುಕೊಂಡ ನಂತರ, ಮಾನ್ಸಾ ಕ್ಷೇತ್ರದ ಜನರು ನನಗೆ ಶಕ್ತಿ ತುಂಬಿದರು ಹಾಗೂ ನಮ್ಮ ಕುಟುಂಬದ ಬೆನ್ನಿಗೆ ನಿಲ್ಲುವುದನ್ನು ಮುಂದುವರಿಸಿದರು ಎಂದು ಸ್ಮರಿಸಿದ್ದಾರೆ.
“ನಾವು ಚುನಾವಣೆಯಲ್ಲಿ ಹೋರಾಟ ನಡೆಸಲಿದ್ದೇವೆ. ನನಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನ್ನ ಶಕ್ತಿ” ಎಂದು ಅವರು ಜನರನ್ನುದ್ದೇಶಿಸಿ ಮನವಿ ಮಾಡಿದ್ದಾರೆ.
“ವಿಧಾನಸಭೆಗೆ ಹೋಗಬೇಕು ಎಂಬ ನನ್ನ ಪುತ್ರನ ಬಯಕೆ ಅಪೂರ್ಣವಾಗಿತ್ತು. ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಹಾಗೂ ಗೆಲುವು ಸಾಧಿಸಲಿದ್ದೇವೆ. ಆತನ ಬಯಕೆಯನ್ನು ಪೂರೈಸಲು ನಾನು ನನ್ನ ಪುತ್ರನ ಭಾವಚಿತ್ರವನ್ನು ವಿಧಾನಸಭೆಗೆ ಕೊಂಡೊಯ್ಯಲಿದ್ದೇನೆ” ಎಂದು ಅವರು ಘೋಷಿಸಿದ್ದಾರೆ.
ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿದ್ದ ಶುಭ್ ದೀಪ್ ಸಿಂಗ್ ಸಿಧುರನ್ನು ಮೇ 29, 2022ರಲ್ಲಿ ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು.
2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಧು ಮೂಸೆವಾಲಾ, ಆಪ್ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು.







