ಸೋನಭದ್ರ: ಕಲ್ಲು ಗಣಿ ಕುಸಿತ; ಮೃತರ ಸಂಖ್ಯೆ 6ಕ್ಕೆ ಏರಿಕೆ

Photo Credit : PTI
ಲಕ್ನೊ, ನ. 17: ಪೂರ್ವ ಉತ್ತರಪ್ರದೇಶದ ಸೋನ್ ಭದ್ರ ಜಿಲ್ಲೆಯಲ್ಲಿ ಕುಸಿದ ಕಲ್ಲು ಗಣಿಯ ಅವಶೇಷಗಳಡಿ ಸೋಮವಾರ ಬೆಳಗ್ಗೆ ಮತ್ತೆ 5 ಶವಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನಭದ್ರದ ಬಿಲ್ಲಿ ಮರ್ಕುಂಡಿ ಗಣಿಗಾರಿಕೆ ಪ್ರದೇಶದಲ್ಲಿ ಶನಿವಾರ ಅಪರಾಹ್ನ ದುರಂತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಒಂದು ಮೃತದೇಹವನ್ನು ರಕ್ಷಣಾ ತಂಡ ರವಿವಾರ ಪತ್ತೆ ಮಾಡಿತ್ತು.
ಮತ್ತೆ 5 ಮೃತದೇಹಗಳು ಪತ್ತೆಯಾಗಿರುವುದನ್ನು ದೃಢಪಡಿಸಿರುವ ಸೋನಭದ್ರ ಜಿಲ್ಲಾ ದಂಡಾಧಿಕಾರಿ ದಾದ್ರಿನಾಥ್ ಸಿಂಗ್, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
80 ರಕ್ಷಣಾ ಸಿಬ್ಬಂದಿ ಸೇರಿದಂತೆ ಎನ್ಡಿಆರ್ಎಫ್ 2 ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಒಂದು ತಂಡದಲ್ಲಿ ಎನ್ಡಿಆರ್ಎಫ್ ನ 40 ರಕ್ಷಣಾ ಸಿಬ್ಬಂದಿ ಇದ್ದಾರೆ ಎಂದು ಎನ್ಡಿಆರ್ಎಫ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.





