ತಾಜ್ ಮಹಲ್ ನಲ್ಲಿ ನಡೆಯುವ ಉರೂಸ್ ಗೆ ನಿಷೇಧ ಹೇರಬೇಕು: ಹಿಂದೂ ಮಹಾಸಭಾ ಆಗ್ರಹ

Photo Credit : PTI
ಲಕ್ನೊ: ಉತ್ತರ ಪ್ರದೇಶದ ಆಗ್ರಾ ಪಟ್ಟಣದಲ್ಲಿ ನಡೆಯಲಿರುವ ಮೂರು ದಿನಗಳ ಅವಧಿಯ ಉರೂಸ್ ಅನ್ನು ನಿಷೇಧಿಸಬೇಕು ಎಂದು ಹಿಂದೂ ಬಲಪಂಥೀಯ ಸಂಘಟನೆಗಳು ಆಗ್ರಹಿಸಿವೆ.
ಪ್ರೀತಿಯ ಸ್ಮಾರಕ ತಾಜ್ ಮಹಲ್ ಎದುರು ಗುರುವಾರದಿಂದ ಪ್ರಾರಂಭವಾಗಲಿರುವ ಪ್ರಸ್ತಾವಿತ ಉರೂಸ್ ಕಾರ್ಯಕ್ರಮವನ್ನು ಪ್ರತಿಭಟಿಸಿ ಧರಣಿ ನಡೆಸಿದ ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕರ್ತರು, ಉರೂಸ್ ಗೆ ನಿಷೇಧ ಹೇರಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿದರು.
“ತಾಜ್ ಮಹಲ್ ನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಸ್ಥಳೀಯ ನಿವಾಸಿಗಳಿಗೆ ಈ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಮಾತ್ರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ” ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷೆ ಮೀರಾ ರಾಥೋರ್ ಹೇಳಿದರು.
“ತಾಜ್ ಮಹಲ್ ಒಳಗೆ ಉರೂಸ್ ನಡೆದ ಇತಿಹಾಸವೇ ಇಲ್ಲ. ಒಂದು ವೇಳೆ ತಾಜ್ ಮಹಲ್ ಒಳಗೆ ಉರೂಸ್ ನಡೆಸಲು ಅನುಮತಿ ನೀಡಿದರೆ, ಹಿಂದುತ್ವ ಸಂಘಟನೆಗಳು ಶಿವ ತಾಂಡವ ಕಾರ್ಯಕ್ರಮವನ್ನು ಆಯೋಜಿಸಲಿವೆ”, ಎಂದು ಅವರು ಎಚ್ಚರಿಕೆ ನೀಡಿದರು.
ಉರೂಸ್ ಗೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗ್ರಾದ ಜಿಲ್ಲಾ ನ್ಯಾಯಾಲಯದ ಮುಂದೆ ಬಾಕಿಯಿದೆ. ಈ ಅರ್ಜಿಯ ವಿಚಾರಣೆ ಗುರುವಾರ ನ್ಯಾಯಾಲಯದ ಮುಂದೆ ಬರಲಿದೆ.





