Tamil Nadu | ಚುನಾವಣೆಗೂ ಮುನ್ನ NDAಗೆ ಮರುಸೇರ್ಪಡೆಯಾದ ದಿನಕರನ್ ನೇತೃತ್ವದ AMMK

Photo Credit : indiatoday.in
ಹೊಸದಿಲ್ಲಿ: ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ ವಿಶ್ವಾಸದ್ರೋಹವೆಸಗಿದೆ ಎಂದು ದೂಷಿಸಿ ಮೈತ್ರಿಕೂಟದಿಂದ ಹೊರ ನಡೆದಿದ್ದ ಕೆಲ ತಿಂಗಳುಗಳ ಬಳಿಕ, ಬಹು ನಿರೀಕ್ಷಿತ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಟಿ.ಟಿ.ವಿ. ದಿನಕರನ್ ನೇತೃತ್ವದ ಎಎಂಎಂಕೆ ಬುಧವಾರ ಎನ್ಡಿಎ ಮೈತ್ರಿಕೂಟಕ್ಕೆ ಮರುಸೇರ್ಪಡೆಯಾಗಿದೆ.
ವರ್ಷಾನುಗಟ್ಟಲೆಯಿಂದ ಆಂತರಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಎಐಎಡಿಎಂಕೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ, ದಿನಕರನ್ ಮರಳಿ ಎನ್ಡಿಎ ಮೈತ್ರಿಕೂಟದ ತೆಕ್ಕೆಗೆ ಸೇರಿರುವುದನ್ನು ಸ್ವಾಗತಿಸಿದ್ದಾರೆ.
ತಮ್ಮ ಪಕ್ಷವನ್ನು ಮರುವಾಗಿ ಎನ್ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ ಎಎಂಎಂಕೆ ಮುಖ್ಯಸ್ಥ ದಿನಕರನ್, ಅದೇ ವೇಳೆ ಎಐಎಡಿಎಂಕೆಯೊಳಗೆ ದಾಯಾದಿ ಹಗೆತನವಿರುವುದನ್ನೂ ಒಪ್ಪಿಕೊಂಡಿದ್ದಾರೆ.
ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷದ ಸಂಸ್ಥಾಪಕ-ಮುಖ್ಯಸ್ಥ ದಿನಕರನ್ ಅವರು ಬುಧವಾರ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ, ಅವರು ಎನ್ಡಿಎ ಮೈತ್ರಿಕೂಟಕ್ಕೆ ಅಧಿಕೃತವಾಗಿ ಮರುಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಪಿಯೂಷ್ ಗೋಯಲ್, “ಎನ್ಡಿಎ ಒಗ್ಗಟ್ಟಾಗಿ ಕೆಲಸ ಮಾಡಲಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟವನ್ನು ಪರಾಭವಗೊಳಿಸಲಿದೆ” ಎಂದು ಹೇಳಿದರು.







