ಉಪಚುನಾವಣೆಯ ಹೊಸ್ತಿಲಲ್ಲೇ ತರನ್ತಾರನ್ ಎಸ್ಎಸ್ಪಿ ಅಮಾನತು

ತರನ್ತಾರನ್ |Photo Credit : hindustantimes.com
ತರನ್ತಾರನ್, ನ.9: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇವಲ ಮೂರು ದಿನಗಳು ಉಳಿದಿರುವಾಗಲೇ ತರನ್ತಾರನ್ ಜಿಲ್ಲಾ ಪೊಲೀಸ್ ಅಧೀಕ್ಷಕಿ ರವಜೋತ್ ಕೌರ್ ಗ್ರೆವಾಲ್ ಅವರನ್ನು ಚುನಾವಣಾ ಆಯೋಗ ರವಿವಾರ ಅಮಾನತುಗೊಳಿಸಿದೆ.
ಗ್ರೆವಾಲ್ ಅವರ ಅಮಾನತಿಗೆ ಚುನಾವಣಾ ಆಯೋಗವು ಯಾವುದೇ ಕಾರಣವನ್ನು ನೀಡಿಲ್ಲ. ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ಸಿಂಗ್ ಬಾದಲ್ ಅವರು ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದಿಂದ ನೇಮಕಗೊಂಡ ವೀಕ್ಷಕರನ್ನು ಭೇಟಿಯಾಗಿ, ಚುನಾವಣೆಯಲ್ಲಿ ಪಂಜಾಬ್ನ ಆಡಳಿತಾರೂಢ ಆಪ್ ಪಕ್ಷಕ್ಕೆ ನೆರವಾಗುವುದಕ್ಕಾಗಿ ಅಧಿಕಾರಿಗಳು, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆಂದು ‘ ದಿ ಹಿಂದೂಸ್ತಾನ್ ಟೈಮ್ಸ್ʼ ವರದಿ ಮಾಡಿದೆ.
ಚುನಾವಣಾ ಪ್ರಚಾರವನ್ನು ನಡೆಸಲು ತನ್ನ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಗ್ರೆವಾಲ್ ಅವರು ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ್ದಾರೆಂದು ಶಿರೋಮಣಿ ಅಕಾಲಿದಳವು ಆಪಾದಿಸಿದೆ.
ಉಪಚುನಾವಣೆಗೆ ಪೂರ್ವಭಾವಿಯಾಗಿ ತನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಬಲವಂತವಾಗಿ ಬಂಧಿಸಲಾಗುತ್ತಿದೆ ಎಂದು ರಾಜ್ಯದ ಆಡಳಿತವು ತನ್ನ ಅಭ್ಯರ್ಥಿ ಸುಖವಿಂದರ್ ಕೌರ್ ರಾಂಧವಾ ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಗುರಿಯಿರಿಸಿದೆ ಎಂದು ಶಿರೋಮಣಿ ಅಕಾಲಿದಳ ಪಕ್ಷವು ಅಪಾದಿಸಿದೆ.
ರಾಂಧವಾ ಹಾಗೂ ಆಕೆಯ ಪುತ್ರಿ ಕಾಂಚನ್ಪ್ರೀತ್ ಕೌರ್ ವಿರುದ್ಧ ಕಣ್ಗಾವಲು ಚಟುವಟಿಕೆಗಳನ್ನು ನಡೆಸಲಾಗುತ್ತಿದೆಯೆಂದೂ ಸುಖಬೀರ್ ಸಿಂಗ್ ಬಾದಲ್ ಅವರು ಆಪಾದಿಸಿದ್ದಾರೆ.







