ಕಾಶಿ ದೇವಾಲಯದ ನಿರ್ಬಂಧಿತ ‘ಕೆಂಪು ವಲಯ’ದ ಒಳಗೆ ತೇಜ್ ಪ್ರತಾಪ್ ಇರುವ ವೀಡಿಯೊ ಪ್ರಸಾರ; ತನಿಖೆಗೆ ಆದೇಶ

PC : NDTV
ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ‘ಕೆಂಪು ವಲಯ’ದ ಒಳಗೆ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಇರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ದೇವಾಲಯದ ಆಡಳಿತ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ವಲಯ ಕಾಶಿ ವಿಶ್ವನಾಥ ಕಾರಿಡಾರ್ ನ ಒಳಗಿನ ಪ್ರದೇಶವನ್ನು ಉಲ್ಲೇಖಿಸುತ್ತದೆ. ಇದು ದೇವಾಲಯದ ಆವರಣವನ್ನು ಕೂಡ ಒಳಗೊಂಡಿದೆ. ಈ ಪ್ರದೇಶದಲ್ಲಿ ಮೊಬೈಲ್ ಫೋನ್ಗಳಿಗೆ ನಿಷೇಧ ವಿಧಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಗುರುವಾರದಿಂದ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ದೇವಾಲಯದ ಆವರಣದ ಒಳಗೆ ತೇಜ್ ಪ್ರತಾಪ್ ಯಾದವ್ ಅವರು ಸುತ್ತು ಹಾಕುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದ ಆಡಳಿತಕ್ಕೆ ಈ ವೀಡಿಯೊದ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆ ಹಾಗೂ ವಿವಿಧ ದಿನಪತ್ರಿಕೆಗಳ ಮೂಲಕ ತಿಳಿಯಿತು ಎಂದು ಕಾಶಿ ವಿಶ್ವನಾಥ ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ವಿಶ್ವ ಭೂಷಣ ಮಿಶ್ರಾ ತಿಳಿಸಿದ್ದಾರೆ.
‘‘ಈ ವಿಷಯದ ಕುರಿತು ಕೂಲಂಕಷ ತನಿಖೆ ನಡೆಸಲು ಹಾಗೂ ಸಂಬಂಧಪಟ್ಟ ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಾಹಿತಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹಾಗೂ ಸ್ಥಳೀಯ ಪೊಲೀಸರಿಗೆ ರವಾನಿಸಲಾಗಿದೆ’’ ಎಂದು ಮಿಶ್ರಾ ತಿಳಿಸಿದ್ದಾರೆ.







