ಶಾಸಕರ ಅನರ್ಹತೆ ಪ್ರಕರಣ | ತೆಲಂಗಾಣ ಸ್ಪೀಕರ್ ಗೆ ನ್ಯಾಯಾಂಗ ನಿಂದನೆ ನೋಟಿಸ್

ಗದ್ದಮ್ ಪ್ರಸಾದ್ ಕುಮಾರ್ | Photo Credit : Gaddam Prasad Kumar \ Facebook
ಹೊಸದಿಲ್ಲಿ, ನ. 17: ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರಗೊಂಡ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಯ 10 ಶಾಸಕರ ಅನರ್ಹತೆಗೆ ಸಂಬಂಧಿಸಿ ನೀಡಿದ ನಿರ್ದೇಶನವನ್ನು ಅನುಸರಿಸದೇ ಇರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೆಲಂಗಾಣ ಸ್ಪೀಕರ್ ಗೆ ನ್ಯಾಯಾಂಗ ನಿಂದನೆ ನೋಟಿಸು ಜಾರಿ ಮಾಡಿದೆ.
ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಯ 10 ಶಾಸಕರ ಅನರ್ಹತೆಯನ್ನು ಮೂರು ತಿಂಗಳ ಒಳಗೆ ನಿರ್ಧರಿಸುವಂತೆ ವಿಧಾನ ಸಭಾ ಸ್ಪೀಕರ್ ಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ನ ಪೀಠ ಜುಲೈ 31ರಂದು ನಿರ್ದೇಶಿಸಿತ್ತು.
ತನ್ನ ಹಿಂದಿನ ನಿರ್ದೇಶನಗಳನ್ನು ಅನುಸರಿಸದೇ ಇರುವುದು ‘‘ಅತ್ಯಂತ ಗಂಭೀರ ರೀತಿಯ ನ್ಯಾಯಾಂಗ ನಿಂದನೆ’’ ಎಂದು ಸಿಜೆಐ ನೇತೃತ್ವದ ಪೀಠ ಹೇಳಿತು. ಅನಂತರ ಅದು ಬಿಆರ್ಎಸ್ ನಾಯಕರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿ ಸ್ಪೀಕರ್ ಹಾಗೂ ಇತರರಿಗೆ ನೋಟಿಸು ಜಾರಿ ಮಾಡಿತು.
ಆದರೆ, ಪೀಠ ಮುಂದಿನ ಆದೇಶದ ವರೆಗೆ ತನ್ನ ಮುಂದೆ ಖುದ್ದು ಹಾಜಾರಾಗುವುದರಿಂದ ತೆಲಂಗಾಣ ಸ್ಪೀಕರ್ ಹಾಗೂ ಇತರರಿಗೆ ವಿನಾಯತಿ ನೀಡಿತು.
ಅನರ್ಹತೆ ಅರ್ಜಿಗಳನ್ನು ನಿರ್ಧರಿಸಲು ಇನ್ನೂ 8 ವಾರಗಳು ಕಾಲಾವಕಾಶ ಕೋರಿ ಸ್ಪೀಕರ್ ಅವರ ಕಚೇರಿಯ ಪರವಾಗಿ ಸಲ್ಲಿಸಿದ ಪ್ರತ್ಯೇಕ ಅರ್ಜಿಯ ಕುರಿತಂತೆ ಕೂಡ ಪೀಠ ನೋಟಿಸು ಜಾರಿ ಮಾಡಿತು.







