ಗೋಹತ್ಯೆ ಮಾಡಿ ತಾವೇ ತೋಡಿದ ಖೆಡ್ಡಾಕ್ಕೆ ಬಿದ್ದ ಬಜರಂಗದಳ ಮುಖಂಡರು
ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸಲು ಗೋ ಹತ್ಯೆ ಮಾಡಿದ್ದ ಆರೋಪಿಗಳು

Photo : en.themooknayak.com
ಮೊರಾಬಾದ್ : ಪೊಲೀಸ್ ಅಧಿಕಾರಿಯೋರ್ವರನ್ನು ಹುದ್ದೆಯಿಂದ ತೆಗೆಯಲು, ಮುಸ್ಲಿಂ ವ್ಯಕ್ತಿಯೋರ್ವನನ್ನು ಪ್ರಕರಣದಲ್ಲಿ ಸಿಲುಕಿಸಲು ಗೋ ಹತ್ಯೆ ಮಾಡಿದ್ದ ಬಜರಂಗಳದ ಸದಸ್ಯರು, ತಾವೇ ಹೆಣೆದ ಬಲೆಗೆ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ನ ಮುಖಂಡರ ಸಹಿತ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮೊರಾದಾಬಾದ್ ಜಿಲ್ಲೆಯ ಬಜರಂಗದಳದ ಮುಖ್ಯಸ್ಥ ಸುಮಿತ್ ವಿಷ್ಣೋಯ್ ಅಲಿಯಾಸ್ ಮೋನು ಬಜರಂಗಿ, ರಮನ್ ಚೌಧರಿ, ರಾಜೀವ್ ಚೌಧರಿ ಹಾಗೂ ಅವರಿಗೆ ಸಹಕರಿಸಿದ್ದ ಸ್ಥಳೀಯ ಶಹಾಬುದ್ದೀನ್ ಎಂಬಾತನನ್ನು ಬಂಧಿಸಿರುವುದಾಗಿ ಮೊರಾದಾಬಾದ್ ಎಸ್ಎಸ್ಪಿ ಹೇಮರಾಜ್ ಮೀನಾ ಮಾಹಿತಿ ನೀಡಿದ್ದಾರೆ.
“ಪೊಲೀಸ್ ಠಾಣೆಯ ಉಸ್ತುವಾರಿಯನ್ನು ತೆಗೆಯುವ ಉದ್ದೇಶದಿಂದ ನಾಲ್ವರ ತಂಡ ಎರಡು ವಾರಗಳಲ್ಲಿ ಎರಡು ಸ್ಥಳಗಳಲ್ಲಿ ಗೋಹತ್ಯೆ ಮಾಡಿದೆ. ಬಳಿಕ ಆರೋಪಿಗಳನ್ನು ಬಂಧಿಸಿ ಎಂದು ಒತ್ತಡ ಹೇರಲು ಬೆಂಬಲಿಗರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದ್ದರು. ಪ್ರಕರಣವನ್ನು ಭೇದಿಸಿದಾಗ ಆರೋಪಿಗಳ ಷಡ್ಯಂತ್ರಗಳು ಬಯಲಾಗಿವೆ. ಆರೋಪಿಗಳೊಂದಿಗೆ ಶಾಮೀಲಾಗಿದ್ದ ಛಜಲತ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಮೇಲೆ ಇಲಾಖೆ ತನಿಖೆಗೂ ಸೂಚನೆ ನೀಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂ ವ್ಯಕ್ತಿಯೋರ್ವನ ಮೇಲಿದ್ದ ಹಳೆಯ ವೈಷ್ಯಮ್ಯ ಹಾಗೂ ಛಜಲತ್ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಹುದ್ದೆಯಿಂದ ತೆಗದುಹಾಕುವ ಉದ್ದೇಶ ಬಜರಂಗಳದ ಸದಸ್ಯರಿಗಿತ್ತು. ಇದಕ್ಕಾಗಿ ಆರೋಪಿ ಶಹಾಬುದ್ದೀನ್ ಎಂಬಾತನನ್ನು ಸಂಪರ್ಕಿಸಿ, ಎರಡು ಸಾವಿರ ರೂ. ಹಣ ನೀಡಿ ಜ.16ರಂದು ಗೋಹತ್ಯೆ ಮಾಡುವಂತೆ ಹೇಳಿದ್ದಾರೆ.
ಮುಂಗಡ ಹಣ ಪಡಿದಿದ್ದ ಆರೋಪಿ ಶಹಾಬುದ್ದೀನ್, ಗೋಹತ್ಯೆ ನಡೆಸಿ, ಪರಾರಿಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿದ್ದ ಬಜರಂಗದಳದ ಮುಖಂಡರು, ಸತ್ತು ಬಿದ್ದಿದ್ದ ಗೋವುಗಳ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಛಜಲತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಆರೋಪಿಗಳನ್ನು ಗಲ್ಲಿಗೇರಿಸುವಂತೆ ಬಜರಂಗದಳದ ಮುಖಂಡರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದರು. ಠಾಣೆಯ ಉಸ್ತುವಾರಿ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಹುದ್ದೆಯಿಂದ ತೆಗೆಯುವಂತೆ ಒತ್ತಡ ಹಾಕಿದ್ದರು ಎಂದು ತಿಳಿದು ಬಂದಿದೆ.
ಆದರೆ, ಪ್ರತಿಭಟನೆ ನಡೆಸಿದರೂ ಕೂಡ ಪೊಲೀಸ್ ಇಲಾಖೆ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಇದೇ ರೀತಿಯ ಕೃತ್ಯವನ್ನು ಜನವರಿ 28ರಂದು ಎಸಗಿದ್ದರು. ಜೊತೆಗೆ, ಪ್ರಕರಣದಲ್ಲಿ ಸಿಲುಕಿಸಲು ಬಯಸಿದ್ದ ಮಕ್ಸೂದ್ ಎಂಬಾತನ ಫೋಟೋ, ಪರ್ಸ್ ಘಟನಾ ಸ್ಥಳದಲ್ಲಿ ಎಸೆಯುವಂತೆ ಬಜರಂಗದಳದ ಮುಖಂಡರು ಆರೋಪಿ ಶಹಾಬುದ್ದೀನ್ ಮಾರ್ಗದರ್ಶನ ನೀಡಿದ್ದರು ಎನ್ನಲಾಗಿದೆ.
ಬಳಿಕ ಚೇತ್ರಂಪುರ ಗ್ರಾಮದ ಕಾಡಿನಲ್ಲಿ ರಾತ್ರಿ ಗೋಹತ್ಯೆ ನಡೆದಿರುವುದಾಗಿ ಆರೋಪಿಸಿದ ಬಜರಂಗದಳದ ಮುಖಂಡರು, ಘಟನಾ ಸ್ಥಳದಿಂದಲೇ ಲೈವ್ ವಿಡಿಯೋ ಮಾಡಿದ್ದರು. ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಕ್ಸೂದ್ ಎಂಬಾತನ ಫೋಟೋ, ಪರ್ಸ್ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಬಳಿಕ ಮಕ್ಸೂದ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದಾಗ, ಹಳೆಯ ವೈಷಮ್ಯ ಇರುವುದರಿಂದ ನನ್ನನ್ನು ಸಿಲುಕಿಸಲು ಷಡ್ಯಂತ್ರ ಮಾಡಿರಬಹುದು ಎಂದು ಮಾಹಿತಿ ಅವರು ನೀಡಿದ್ದರು ಎನ್ನಲಾಗಿದೆ. ವೈಷಮ್ಯದ ಹಿನ್ನೆಲೆಯನ್ನು ಅರಿತ ಪೊಲೀಸರು, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಶಹಾಬುದ್ದೀನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಜರಂಗದಳದ ಮುಖಂಡರ ಕೃತ್ಯ ಬಯಲಾಯಿತು ಎಂದು ತಿಳಿದು ಬಂದಿದೆ.
ಬಜರಂಗದಳದ ಮುಖ್ಯಸ್ಥ ಸುಮಿತ್ ವಿಷ್ಣೋಯ್ ಅಲಿಯಾಸ್ ಮೋನು ಬಜರಂಗಿ | Photo : en.themooknayak.com
ಬಜರಂಗದಳದ ಮುಖಂಡರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಿದ್ದ ಪೊಲೀಸರು, ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
“ಬಜರಂಗದಳದ ಮುಖಂಡರ ಸೂಚನೆಯ ಮೇರೆಗೆ ಜನವರಿ 28ರಂದು ರಾತ್ರಿ ಆರೋಪಿಗಳಲ್ಲೋರ್ವನಾದ ಶಹಾಬುದ್ದೀನ್ ಎಂಬಾತ ಮತ್ತೊಬ್ಬ ಸಹಚರ ಜಮ್ ಶದ್ ಎಂಬಾತನ ಜೊತೆಗೂಡಿ ಚೇತ್ರಂಪುರ ಗ್ರಾಮದ ಕಮಲಾದೇವಿ ಎಂಬುವವರ ಮನೆಯ ಹೊರಗೆ ಕಟ್ಟಿದ್ದ ಹಸುವನ್ನು ಕಳವು ಮಾಡಿದ್ದ. ಇದಾದ ಬಳಿಕ ಇಬ್ಬರೂ ಕಾಡಿಗೆ ಹೋಗಿ ಗೋಹತ್ಯೆ ಮಾಡಿ ಅಲ್ಲಿಂದ ತೆರಳಿದ್ದರು. ಆ ಬಳಿಕ ಬಜರಂಗದಳದವರಿಗೆ ಮಾಹಿತಿ ನೀಡಿದ್ದರು” ಎಂದು ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ.
ವಿಶೇಷ ಪೊಲೀಸರ ತನಿಖೆಯ ವೇಳೆ ಛಜಲತ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಅವರು ಆರೋಪಿಗಳೊಂದಿಗೆ ಸಹಕರಿಸಿರುವುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇನ್ಸ್ ಪೆಕ್ಟರ್ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆರೋಪಿಗಳ ಕಾಲ್ ರೆಕಾರ್ಡ್ನಲ್ಲಿ ಸಬ್ ಇನ್ಸ್ಪೆಕ್ಟರ್ ಅವರ ಮೊಬೈಲ್ ನಂಬರ್ ಸಂಖ್ಯೆ ಇರುವುದು ತಿಳಿದು ತನಿಖೆ ನಡೆಸಿದೆವು. ಈ ವೇಳೆ ಸಬ್ ಇನ್ಸ್ಪೆಕ್ಟರ್ ಆರೋಪಿಗಳೊಂದಿಗೆ ಶಾಮೀಲಾಗಿರುವುದು ಕಂಡುಬಂದಿದೆ. ಅವರು, ಪೊಲೀಸರ ಪ್ರತಿಯೊಂದು ನಡೆಯ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನರೇಂದ್ರ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆಗೂ ಆದೇಶಿಸಲಾಗಿದೆ” ಎಂದು ಎಸ್ಎಸ್ಪಿ ಹೇಮರಾಜ್ ಮೀನಾ ತಿಳಿಸಿದ್ದಾರೆ.







