"ಮಾನ್ಸೂನ್ ಹೊಸ ಆರಂಭಗಳ ಕಾಲ": ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
"ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನೆಯು ತನ್ನ ಗುರಿಯ 100 ಪ್ರತಿಶತವನ್ನು ಸಾಧಿಸಿತು"

Photo credit: PTI
ಹೊಸದಿಲ್ಲಿ:ಮಾನ್ಸೂನ್ ಹೊಸ ಆರಂಭಗಳ ಕಾಲ. ಆದ್ದರಿಂದ ಮಾನ್ಸೂನ್ ಅಧಿವೇಶನವು ರಾಷ್ಟ್ರಕ್ಕೆ ಹೆಮ್ಮೆಯ ವಿಷಯ. ಇದು ರಾಷ್ಟ್ರಕ್ಕೆ ವಿಜಯೋತ್ಸವದ ಹಬ್ಬದಂತೆ. ಮೊದಲ ಬಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ, ಭಾರತ ಬಾಹ್ಯಾಕಾಶ ನಿಲ್ದಾಣಕ್ಕೆ ಕಾಲಿಡುವುದರಿಂದ ಹಿಡಿದು 2026 ರ ವೇಳೆಗೆ "ನಕ್ಸಲ್ ಮುಕ್ತ" ದೇಶವನ್ನು ನಿರ್ಮಿಸುವ ಸರ್ಕಾರದ ಸಂಕಲ್ಪದವರೆಗೆ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
"ಇಡೀ ಜಗತ್ತು ಭಾರತೀಯ ಸಶಸ್ತ್ರ ಪಡೆಗಳ ಶಕ್ತಿಯನ್ನು ಕಂಡಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನೆಯು ತನ್ನ ಗುರಿಯ 100 ಪ್ರತಿಶತವನ್ನು ಸಾಧಿಸಿತು. ಕೆಂಪು ಕಾರಿಡಾರ್ಗಳು ಹಸಿರು ಪಸರಿಸುವ ವಲಯಗಳಾಗಿ ಬದಲಾಗುತ್ತಿವೆ," ಎಂದು ಅವರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.
ಪ್ರಧಾನಿ ಮೋದಿ ಅವರು ದೇಶದ ಗೌರವವನ್ನು ಹೆಚ್ಚಿಸುವ ಪ್ರಮುಖ ಬೆಳವಣಿಗೆಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿದುದನ್ನು ಉಲ್ಲೇಖಿಸಿದರು. ಭಾರತದಲ್ಲಿ ತಯಾರಿಸಲಾದ' ಶಸ್ತ್ರಾಸ್ತ್ರಗಳು ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದವು ಎಂದು ಅವರು ಹೇಳಿದರು.
ಮಾನ್ಸೂನ್ ಅಧಿವೇಶನವು 32 ದಿನಗಳ ಅವಧಿಯಲ್ಲಿ ಒಟ್ಟು 21 ದಿನಗಳ ಅಧಿವೇಶನಗಳನ್ನು ನಡೆಸಲಿದೆ. ಅಧಿವೇಶನವು ಆಗಸ್ಟ್ 21 ರಂದು ಮುಕ್ತಾಯಗೊಳ್ಳಲಿದೆ.







