‘ರಾಮಲೀಲಾ’ ನಾಟಕದಲ್ಲಿ ಸೀತೆ ಧೂಮಪಾನ ಮಾಡುವ ದೃಶ್ಯ ; ಪುಣೆ ವಿವಿ ಪ್ರಾಧ್ಯಾಪಕ, ಐವರು ವಿದ್ಯಾರ್ಥಿಗಳ ಬಂಧನ
Photo: indianexpress.com
ಪುಣೆ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲಾಗಿದೆ ಎಂಬ ಆರೋಪದಲ್ಲಿ ಸಾವಿತ್ರಿ ಭಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಓರ್ವ ಪ್ರಾಧ್ಯಾಪಕ ಹಾಗೂ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ರಾಮಲೀಲಾ’ ಆಧಾರಿತ ನಾಟಕದಲ್ಲಿ ಆಕ್ಷೇಪಾರ್ಹ ಸಂಭಾಷಣೆ ಹಾಗೂ ದೃಶ್ಯಗಳಿದ್ದವು ಎಂಬ ಕಾರಣಕ್ಕೆ ಈ ಬಂಧನ ನಡೆದಿದೆ. ಈ ನಾಟಕದ ವೈರಲ್ ವಿಡಿಯೊವೊಂದರಲ್ಲಿ ಸೀತೆಯ ಪಾತ್ರ ಮಾಡಿದ್ದ ಯುವಕನೊಬ್ಬ ಸಿಗರೇಟ್ ಸೇದುತ್ತಾ, ನಿಂದನಾತ್ಮಕ ಬೈಗುಳ ಬಳಸಿರುವುದು ಕಂಡು ಬಂದಿದೆ.
ಶುಕ್ರವಾರ ಪುಣೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಈ ನಾಟಕ ಪ್ರದರ್ಶನಗೊಂಡಾಗ, ಆರೆಸ್ಸೆಸ್ ನೊಂದಿಗೆ ಗುರುತಿಸಿಕೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಪುಣೆ ವಿಶ್ವವಿದ್ಯಾಲಯದ ಲಲಿತ ಕಲಾ ಕೇಂದ್ರದ ಸದಸ್ಯರೊಂದಿಗೆ ಘರ್ಷಣೆಗೆ ಕಾರಣವಾಯಿತು.
ಕಲಾ ಪ್ರದರ್ಶನಗಳ ಕೇಂದ್ರ ಎಂದು ಅಧಿಕೃತವಾಗಿ ಕರೆಯಲಾಗುವ ಲಲಿತ ಕಲಾ ಕೇಂದ್ರವು ರಾಮಲೀಲಾ ನಾಟಕದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುವ ಕಲಾವಿದರ ನೇಪಥ್ಯದಲ್ಲಿನ ವರ್ತನೆಗಳನ್ನು ಕುರಿತಾಗಿದೆ.
ಎಬಿವಿಪಿ ಖಜಾಂಚಿ ಹರ್ಷವರ್ಧನ್ ಹರ್ಪುಡೆ ದಾಖಲಿಸಿರುವ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295(ಎ) (ಯಾವುದೇ ವರ್ಗದ ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಘಾಸಿಯನ್ನುಂಟು ಮಾಡುವಂತಹ ವರ್ತನೆ) ಹಾಗೂ ಇನ್ನಿತರ ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಲಲಿತ ಕಲಾ ಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಪ್ರವೀಣ್ ಭೋಲೆ, ವಿದ್ಯಾರ್ಥಿಗಳಾದ ಭವೇಶ್ ಪಾಟೀಲ್, ಜಯ್ ಪೆಡ್ನೇಕರ್, ಪ್ರಥಮೇಶ್ ಸಾವಂತ್, ರಿಷಿಕೇಶ್ ದಲ್ವಿ ಹಾಗೂ ಯಶ್ ಚಿಖ್ಲೆಯನ್ನು ಬಂಧಿಸಿದ್ದಾರೆ.