ಬಿಹಾರದ ತಪ್ಪುಗಳನ್ನು ಪುನರಾವರ್ತಿಸಬೇಡಿ: ಕಾರ್ಯಕರ್ತರಿಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ತಾಕೀತು

ಅಭಿಷೇಕ್ ಬ್ಯಾನರ್ಜಿ | PC : PTI
ಕೋಲ್ಕತ್ತಾ: ಬಿಹಾರದ ತಪ್ಪುಗಳನ್ನು ಪುನರಾವರ್ತಿಸಬೇಡಿ ಎಂದು ಸೋಮವಾರ ಟಿಎಂಸಿ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮತದಾರರಿಗೆ ವಿತರಿಸಿರುವ ಶೇ. 100ರಷ್ಟು ಎಣಿಕೆ ಅರ್ಜಿಗಳನ್ನು ಸಲ್ಲಿಸುವ ಗುರಿಯನ್ನು ಹೊಂದಿರಬೇಕು ಎಂದು ತಾಕೀತು ಮಾಡಿದ್ದಾರೆ.
ವರ್ಚುಯಲ್ ಕಾನ್ಫರೆನ್ಸ್ ಮೂಲಕ 25,000 ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದರಲ್ಲದೆ, ನೆರೆಯ ರಾಜ್ಯದಲ್ಲಿ ವಿಪಕ್ಷಗಳು ಮಾಡಿದ ತಪ್ಪನ್ನು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ಪುನರಾವರ್ತಿಸಬಾರದು ಎಂದು ಕರೆ ನೀಡಿದರು.
“ಎಣಿಕೆ ಅರ್ಜಿಗಳನ್ನು ಸಲ್ಲಿಸುವುದು ನಮ್ಮ ಆದ್ಯತೆಯಾಗಿರಬೇಕು” ಎಂದು ಸಭೆಯಲ್ಲಿ ಭಾಗಿಯಾಗಿದ್ದ ಟಿಎಂಸಿ ಸಂಸದರು, ಶಾಸಕರು, ಪಕ್ಷದ ಎಲ್ಲ ಹಂತದ ರಾಜ್ಯ ಮತ್ತು ಜಿಲ್ಲಾ ನಾಯಕರಿಗೆ ಅಭಿಷೇಕ್ ಬ್ಯಾನರ್ಜಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
“ಶೇ. 99ರಷ್ಟು ಅರ್ಜಿ ಸಲ್ಲಿಕೆಯಲ್ಲ; ನಾವು ಶೇ. 100ರಷ್ಟು ಎಣಿಕೆ ಅರ್ಜಿಗಳನ್ನು ಸಲ್ಲಿಸಬೇಕು. ನಮ್ಮ ವಾರ್ ರೂಂಗಳು ಭಾರಿ ಜಾಗೃತ ಸ್ಥಿತಿಯಲ್ಲಿರಬೇಕು. ಮುಂಬರುವ ಚುನಾವಣೆಯಲ್ಲಿ ಭಾರಿ ಪ್ರಾಮುಖ್ಯತೆ ಹೊಂದಿರುವ ಈ ವಿಷಯದ ಕರ್ತವ್ಯವನ್ನು ನಮ್ಮ ಶಾಸಕರೇ ಮುನ್ನಡೆಸಬೇಕು” ಎಂದೂ ಅವರು ಕಿವಿಮಾತು ಹೇಳಿದ್ದಾರೆ. ಟಿಎಂಸಿ ಪಕ್ಷವು ಸದ್ಯ ನಡೆಯುತ್ತಿರುವ ‘ವೋಟ್ ಸುರಕ್ಷಾ’ ಶಿಬಿರಗಳನ್ನು ಮುಂದಿನ ವರ್ಷದ ಜನವರಿ 31ರವರೆಗೆ ವಿಸ್ತರಿಸಲಿದೆ ಎಂದೂ ಅವರು ಘೋಷಿಸಿದರು.







