ಉತ್ತರಪ್ರದೇಶ | ಮುಸ್ತಾಫಾಬಾದ್ ಇನ್ನು ಕಬೀರ್ಧಾಮ್!

ಮುಖ್ಯಮಂತ್ರಿ ಆದಿತ್ಯನಾಥ್ | Photo Credit : PTI
ಲಕ್ನೋ, ಅ. 27: ಉತ್ತರಪ್ರದೇಶದ ಲಖೀಮ್ಪುರ್ ಖೇರಿ ಜಿಲ್ಲೆಯ ಮುಸ್ತಾಫಾಬಾದ್ ನಗರಕ್ಕೆ ‘ಕಬೀರ್ಧಾಮ್’ ಎಂಬುದಾಗಿ ಮರುನಾಮಕರಣ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ. ಇದು ಅಭಿಮಾನವನ್ನು ಮರುಸ್ಥಾಪಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
‘‘ಫೈಝಾಬಾದ್ ಈಗ ಅಯೋಧ್ಯೆಯಾಗಿದೆ, ಅಲಹಾಬಾದ್ ಪ್ರಯಾಗ್ ರಾಜ್ ಆಗಿದೆ. ಇನ್ನು ಮುಸ್ತಾಫಾಬಾದನ್ನು ಮತ್ತೆ ಕಬೀರ್ ಧಾಮ್ ಮಾಡಲಾಗುವುದು. ಈ ಮೂಲಕ ಅಭಿಮಾನವನ್ನು ಮರಳಿ ಪಡೆಯುವ ಕಾರ್ಯಕ್ರಮದೊಂದಿಗೆ ನಿಮ್ಮನ್ನು ಬೆಸೆಯಲಾಗಿದೆ’’ ಎಂದು ಲಖೀಮ್ ಪುರ್ ಖೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.
‘‘ಮುಸ್ತಾಫಾಬಾದ್ ಹೆಸರನ್ನು ನಾನು ಮೊದಲ ಬಾರಿ ಕೇಳಿದಾಗ, ಅಲ್ಲಿ ಎಷ್ಟು ಜನ ಮುಸ್ಲಿಮರು ವಾಸಿಸುತ್ತಿದ್ದಾರೆ ಎಂದು ನಾನು ಕೇಳಿದೆ. ಯಾರೂ ಇಲ್ಲ ಎಂಬ ಉತ್ತರ ಬಂತು. ಆದರೆ, ಹೆಸರು ಮುಸ್ತಾಫಾಬಾದ್. ಈ ಹೆಸರು ಬದಲಾಗಬೇಕು, ಅದನ್ನು ಕಬೀರ್ ಧಾಮ್ ಎಂದು ಮಾಡಬೇಕು ಎಂದು ನಾನು ಹೇಳಿದೆ. ಹೆಸರು ಬದಲಾವಣೆ ಪ್ರಸ್ತಾವ ಈಗ ನಮ್ಮ ಮುಂದಿದೆ. ಆ ಪ್ರಕ್ರಿಯೆಯನ್ನು ನಾವು ಆರಂಭಿಸುತ್ತೇವೆ’’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಹೇಳಿದರು.





