ಅಂಬೇಡ್ಕರ್ ಪ್ರತಿಮೆಗಳ ಸುತ್ತ ರಕ್ಷಣಾ ಗೋಡೆಗಳನ್ನು ನಿರ್ಮಿಸಲಾಗುವುದು: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

ಸಿಎಂ ಆದಿತ್ಯನಾಥ್ | Photo Credit : PTI
ಲಕ್ನೊ: ಅಂಬೇಡ್ಕರ್ ಪ್ರತಿಮೆಗಳನ್ನು ಹಾನಿಗೊಳಿಸುವುದನ್ನು ತಡೆಗಟ್ಟಲು ಅವುಗಳ ಸುತ್ತ ರಕ್ಷಣಾ ಗೋಡೆಗಳನ್ನು ನಿರ್ಮಿಸಲಾಗುವುದು ಎಂದು ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ಶನಿವಾರ ಲಕ್ನೊದಲ್ಲಿ ಆಯೋಜನೆಗೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಣಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ಇಂದು ನಮ್ಮ ಸರಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಎಲ್ಲೆಲ್ಲ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆಯೊ, ಅಲ್ಲೆಲ್ಲ ಕೆಲವು ದುಷ್ಟ ಶಕ್ತಿಗಳು ಪದೇ ಪದೇ ಅವರ ಪ್ರತಿಮೆಗಳನ್ನು ಹಾನಿಗೊಳಿಸಲು ಮುಂದಾಗುತ್ತಿವೆ. ಅವರು ಆ ಪ್ರತಿಮೆಗಳಿಗೆ ಹಾನಿಯೆಸಗುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರತಿಮೆಗಳನ್ನು ರಕ್ಷಿಸಲು ನಮ್ಮ ಸರಕಾರ ಅವುಗಳ ಸುತ್ತ ರಕ್ಷಣಾ ಗೋಡೆಯನ್ನು ನಿರ್ಮಿಸುವ ನಿರ್ಧಾರ ಕೈಗೊಂಡಿದೆ" ಎಂದು ಅವರು ಹೇಳಿದ್ದಾರೆ.
"ಒಂದು ವೇಳೆ ಅವರ ಪ್ರತಿಮೆಗಳ ಮೇಲೆ ಮೇಲ್ಚಾವಣಿ ಇಲ್ಲದಿದ್ದರೆ, ಅವುಗಳ ಮೇಲೆ ಛತ್ರಿಯನ್ನು ಅಳವಡಿಸಿ ಭಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಸುರಕ್ಷತೆ ಮತ್ತು ಗೌರವವನ್ನು ಖಾತರಿಗೊಳಿಸಲಾಗುವುದು" ಎಂದೂ ಅವರು ಭರವಸೆ ನೀಡಿದ್ದಾರೆ.





