ಉತ್ತರ ಪ್ರದೇಶ: ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಶೂಗಳನ್ನು ನೆಕ್ಕಲು ಬಲವಂತ; ಆರೋಪಿ ಬಂಧನ
ಹೊಸದಿಲ್ಲಿ: ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ರಾಜೇಂದ್ರ ಚಾಮರ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ವಿದ್ಯುತ್ ಕೆಲಸಗಾರನ ಶೂಗಳನ್ನು ನೆಕ್ಕುವಂತೆ ಬಲವಂತಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜೇಂದ್ರ ದೋಷಪೂರಿತ ವಿದ್ಯುತ್ ವೈರಿಂಗ್ ಅನ್ನು ಪರಿಶೀಲಿಸುತ್ತಿದ್ದರಿಂದ ವಿದ್ಯುತ್ ಕೆಲಸಗಾರ "ಕೋಪಗೊಂಡು ಈ ರೀತಿ ಮಾಡಿದ್ದ" ಎಂದು The Indian Express ವರದಿ ಮಾಡಿದೆ.
ಆರೋಪಿಯನ್ನು ಸೋನಭದ್ರಾ ಜಿಲ್ಲೆಯ ಶಹಗಂಜ್ ಪ್ರದೇಶದ ಗುತ್ತಿಗೆದಾರ ಲೈನ್ ಮ್ಯಾನ್ ತೇಜ್ಬಾಲಿ ಸಿಂಗ್ ಪಟೇಲ್ ಎಂದು ಗುರುತಿಸಲಾಗಿದ್ದು, ರಾಜೇಂದ್ರ ಅವರ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಶನಿವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಒಂದು ವೀಡಿಯೊದಲ್ಲಿ, ಆರೋಪಿಯು 21 ವರ್ಷದ ರಾಜೇಂದ್ರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡುವುದನ್ನು ಕಾಣಬಹುದು. ವೀಡಿಯೊವನ್ನು ರೆಕಾರ್ಡ್ ಮಾಡಿ ಗುಂಪಿನಲ್ಲಿ ಹಂಚಿಕೊಳ್ಳುವಂತೆ ವ್ಯಕ್ತಿಯೊಬ್ಬನಿಗೆ ಹೇಳುತ್ತಿರುವುದು ಕಂಡುಬಂದಿದೆ.
ಎರಡನೇ ವೀಡಿಯೊದಲ್ಲಿ, ರಾಜೇಂದ್ರ, ಆರೋಪಿಯ ಬೂಟುಗಳನ್ನು ನೆಕ್ಕುವುದು ಹಾಗೂ ತನ್ನ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹಾಕಿ ಕ್ಷಮೆಯಾಚಿಸುವುದು ಕಂಡುಬಂದಿದೆ.
“ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ವಿದ್ಯುತ್ ತಂತಿಯಲ್ಲಿ ಸ್ವಲ್ಪ ಸಮಸ್ಯೆ ಇತ್ತು ಹಾಗೂ ನಾನು ಅದನ್ನು ನೋಡುತ್ತಿದ್ದೆ. ತೇಜಬಲಿ ಅಲ್ಲಿಗೆ ಬಂದು ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲು ಆರಂಭಿಸಿದನು. . ಅವನ ಪಾದರಕ್ಷೆಗೆ ಉಗುಳಿ ನೆಕ್ಕುವಂತೆ ಮಾಡಿದನು. ಎರಡು ದಿನ ನಾನು ಏನನ್ನೂ ಹೇಳಲಿಲ್ಲ. ಆದರೆ ಈಗ ಪ್ರಕರಣ ದಾಖಲಿಸಲು ಬಂದಿದ್ದೇನೆ’’ ಎಂದು ರಾಜೇಂದ್ರ ಘಟನೆಯ ಕುರಿತು ಸುದ್ದಿಗಾರರಿಗೆ ತಿಳಿಸಿದರು.
“ಜುಲೈ 8 ರಂದು, ನಾವು ಸಾಮಾಜಿಕ ಮಾಧ್ಯಮದ ಮೂಲಕ ಎರಡು ವೈರಲ್ ವೀಡಿಯೊಗಳನ್ನು ಸ್ವೀಕರಿಸಿದ್ದೇವೆ. ವೀಡಿಯೊಗಳಲ್ಲಿ, ಲೈನ್ ಮ್ಯಾನ್ ತೇಜ್ಬಾಲಿ ಎಂದು ಗುರುತಿಸಲಾದ ವ್ಯಕ್ತಿ… ರಾಜೇಂದ್ರನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದನು. ಅವನು ತನ್ನ ಕಿವಿಗಳನ್ನು ಹಿಡಿದುಕೊಂಡು ಕುಳಿತುಕೊಳ್ಳುವಂತೆ ಮಾಡಿದ ಹಾಗೂ ಅವನ ಬೂಟುಗಳನ್ನು ನೆಕ್ಕುವಂತೆ ಮಾಡಿದ್ದ ”ಎಂದು ಸೋನ್ ಭದ್ರಾ ವೃತ್ತದ ಅಧಿಕಾರಿ (ಘೋರಾವಾಲ್) ಅಮಿತ್ ಕುಮಾರ್ ಹೇಳಿದ್ದಾರೆ ಎಂದು The Indian Express ವರದಿ ಮಾಡಿದೆ.