Kerala | ವೆಲ್ಲಪಲ್ಲಿ ನಟೇಶನ್ ಗೆ ಪದ್ಮಭೂಷಣ; ಪ್ರಶಸ್ತಿ ಹಿಂಪಡೆಯುವಂತೆ ವಿಸಲ್ಬ್ಲೋಯರ್ ಗುಂಪಿನ ಆಗ್ರಹ

ವೆಲ್ಲಪಲ್ಲಿ ನಟೇಶನ್ | Photo: Facebook/ Vellappally Natesan
ತಿರುವನಂತಪುರಂ: ನಾರಾಯಣ ಧರ್ಮ ಪರಿಪಾಲನಾ ಯೋಗಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೆಲ್ಲಪಲ್ಲಿ ನಟೇಶನ್ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ, ನೈತಿಕ ಕಳವಳ ವ್ಯಕ್ತಪಡಿಸಿರುವ ಶಿಕ್ಷಣ ವಲಯದ ವಿಸಲ್ಬ್ಲೋಯರ್ ಗುಂಪಾದ ‘ಸೇವ್ ಯೂನಿವರ್ಸಿಟಿ ಕ್ಯಾಂಪೇನ್ ಕಮಿಟಿ’, ಅವರಿಗೆ ಘೋಷಿಸಲಾದ ಪದ್ಮಭೂಷಣ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಕೇರಳದಲ್ಲಿ ಈಳವ ಸಮುದಾಯವನ್ನು ಪ್ರತಿನಿಧಿಸುವ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಸಂಸ್ಥೆ ಪ್ರಮುಖ ಸಾಮಾಜಿಕ–ಧಾರ್ಮಿಕ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಮಹತ್ವದ ಸಾಮಾಜಿಕ ಹಾಗೂ ರಾಜಕೀಯ ಪ್ರಭಾವವನ್ನು ಹೊಂದಿದೆ. ನಟೇಶನ್ ಅವರು ರಾಜ್ಯದಲ್ಲಿ ಹಲವು ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತಿರುವ ಶ್ರೀ ನಾರಾಯಣ ಟ್ರಸ್ಟ್ನ ಕಾರ್ಯದರ್ಶಿಯೂ ಆಗಿದ್ದಾರೆ.
ಜನವರಿ 27ರಂದು ಮನವಿ ಪತ್ರ ಸಲ್ಲಿಸಿರುವ ‘ಸೇವ್ ಯೂನಿವರ್ಸಿಟಿ ಕ್ಯಾಂಪೇನ್ ಕಮಿಟಿ’ಯ ಅಧ್ಯಕ್ಷ ಆರ್.ಎಸ್. ಶಶಿಕುಮಾರ್, ಈಗ ತಮ್ಮ ಹೆಸರಿನಲ್ಲಿ ಪ್ರಕಟಗೊಂಡಿರುವ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳ ವಿಶ್ವಾಸಾರ್ಹತೆ ಬಗ್ಗೆ ನಟೇಶನ್ ಸಾರ್ವಜನಿಕವಾಗಿ ವ್ಯಂಗ್ಯವಾಡಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪದ್ಮ ಪ್ರಶಸ್ತಿಯನ್ನು ಸಾರ್ವಜನಿಕವಾಗಿಯೇ ಅವಮಾನಿಸಿದ ವ್ಯಕ್ತಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡುವುದು ಅದರ ಘನತೆಯನ್ನು ಕುಗ್ಗಿಸುತ್ತದೆ ಹಾಗೂ ಈ ಹಿಂದೆ ಪ್ರಶಸ್ತಿಯನ್ನು ಸ್ವೀಕರಿಸಿರುವವರ ಪ್ರತಿಷ್ಠೆಗೆ ಮಸಿ ಬಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ನಟೇಶನ್ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಘೋಷಿಸಿದ ಬಳಿಕ, ಇತ್ತೀಚೆಗೆ ಮಲಯಾಳಂ ಸುದ್ದಿತಾಣವೊಂದಕ್ಕೆ ಅವರು ನೀಡಿದ್ದ ಸಂದರ್ಶನವು ಗಮನ ಸೆಳೆದಿತ್ತು. ‘ನಿಮಗೆ ಬಿಜೆಪಿಯೊಂದಿಗೆ ನಿಕಟತೆ ಇದೆ ಎಂಬ ಅಭಿಪ್ರಾಯವಿದ್ದು, ನೀವು ಪದ್ಮಭೂಷಣ ಪ್ರಶಸ್ತಿಗೆ ಅರ್ಹರಾಗಿದ್ದೀರಾ?’ ಎಂಬ ಸಂದರ್ಶಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟೇಶನ್, “ಪದ್ಮಭೂಷಣ ಪ್ರಶಸ್ತಿಗೆ ಏನಾದರೂ ಬೆಲೆ ಇದೆಯೇ? ಅವೆಲ್ಲ ಪ್ರಶಸ್ತಿಗಳೂ ದುಡ್ಡು ನೀಡಿ ಖರೀದಿಸಬಹುದಾದ ವಸ್ತುಗಳಲ್ಲವೇ? ಅದನ್ನು ನನಗೆ ನೀಡಿದರೂ ನಾನು ಸ್ವೀಕರಿಸುವುದಿಲ್ಲ” ಎಂದು ಹೇಳಿದ್ದರು.







