ತಮಿಳುನಾಡಿನಲ್ಲಿ ಕಮಲ ಅರಳಲು ಡಿಎಂಕೆ ಅವಕಾಶ ನೀಡಿದೆ: ನಟ ವಿಜಯ್ ವಾಗ್ದಾಳಿ

ನಟ ವಿಜಯ್ (Photo: PTI)
ಚೆನ್ನೈ: ತಮಿಳುನಾಡಿನಲ್ಲಿ ಕಮಲ (ಬಿಜೆಪಿಯ ಚಿಹ್ನೆ) ಅರಳಲು ಆಡಳಿತಾರೂಢ ಡಿಎಂಕೆ ಪಕ್ಷ ಅವಕಾಶ ನೀಡುತ್ತಿದೆ ಎಂದು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಪ್ರಕಟನೆಯೊಂದನ್ನು ಬಿಡುಗಡೆ ಮಾಡಿರುವ ವಿಜಯ್, "ಪ್ರಮುಖ ದ್ರಾವಿಡ ಪಕ್ಷವಾದ ಡಿಎಂಕೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಹೆಸರಲ್ಲಿ ಜನರನ್ನು ಗೊಂದಲಗೊಳಿಸಿದೆ" ಎಂದು ಟೀಕಾಪ್ರಹಾರ ನಡೆಸಿದ್ದಾರೆ.
"ನಮ್ಮನ್ನು ಕುಗ್ಗಿಸುವ ವಿಫಲ ಪ್ರಯತ್ನದ ನಂತರ, ನಾವು ಕಾಂಚೀಪುರಂ, ಪುದುಚೇರಿ ಹಾಗೂ ಈರೋಡ್ನಲ್ಲಿ ಮೂರು ಯಶಸ್ವಿ ಸಾರ್ವಜನಿಕ ಸಭೆಗಳಿಗೆ ಸಾಕ್ಷಿಯಾದೆವು. ಜನರ ನಮ್ಮೊಂದಿಗೆ ನಿಂತಿರುವುದನ್ನು ಕಂಡು ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದವರು ತಬ್ಬಿಬ್ಬಾಗಿದ್ದಾರೆ" ಎಂದೂ ಅವರು ಹೇಳಿದ್ದಾರೆ.
ಡಿಎಂಕೆಯ ಮುಖವಾಣಿ "ಮುರಸೋಳಿ" ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ಲೇಖನವು ಟಿವಿಕೆಯ ವರ್ಚಸ್ಸಿಗೆ ಕಳಂಕ ಹಚ್ಚುವ ಹಾಗೂ ಅಗೌರವ ತೋರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.





