ವಯನಾಡ್, ಅಲೆಪ್ಪಿ ಕ್ಷೇತ್ರಗಳ ಗೆಲುವಿಗೆ ಕಾರ್ಯತಂತ್ರ : ಕಾಂಗ್ರೆಸ್ ಮುಖಂಡರ ಜತೆ ಝಮೀರ್ ಅಹ್ಮದ್ ಖಾನ್ ಚರ್ಚೆ
![ವಯನಾಡ್, ಅಲೆಪ್ಪಿ ಕ್ಷೇತ್ರಗಳ ಗೆಲುವಿಗೆ ಕಾರ್ಯತಂತ್ರ : ಕಾಂಗ್ರೆಸ್ ಮುಖಂಡರ ಜತೆ ಝಮೀರ್ ಅಹ್ಮದ್ ಖಾನ್ ಚರ್ಚೆ ವಯನಾಡ್, ಅಲೆಪ್ಪಿ ಕ್ಷೇತ್ರಗಳ ಗೆಲುವಿಗೆ ಕಾರ್ಯತಂತ್ರ : ಕಾಂಗ್ರೆಸ್ ಮುಖಂಡರ ಜತೆ ಝಮೀರ್ ಅಹ್ಮದ್ ಖಾನ್ ಚರ್ಚೆ](https://www.varthabharati.in/h-upload/2024/04/03/1258294-screenshot-2024-04-03-232637.webp)
ಕೇರಳ(ವಯನಾಡ್): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನ ಕೇರಳ ಪ್ರವಾಸ ಕೈಗೊಂಡಿದ್ದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರು ವಯನಾಡ್ ನಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ ಅವರು, ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ವಯನಾಡ್ ಹಾಗೂ ಕೆ.ಸಿ.ವೇಣುಗೋಪಾಲ್ ಸ್ಪರ್ಧೆಯ ಅಲೆಪ್ಪಿ ಕ್ಷೇತ್ರಗಳಲ್ಲಿ ಗೆಲುವಿನ ಕಾರ್ಯತಂತ್ರ ಗಳ ಬಗ್ಗೆ ಚರ್ಚಿಸಿದರು. ವಯನಾಡ್ ವ್ಯಾಪ್ತಿಯ ಕಲ್ಪಟ ಶಾಸಕ ಸಿದ್ದಿಕ್, ಸುಲ್ತಾನ್ ಬತ್ತೆರಿ ಶಾಸಕ ಐ.ಸಿ.ಬಾಲಕೃಷ್ಣನ್, ಅಲೆಪ್ಪಿ ವ್ಯಾಪ್ತಿಯ ಅರೂರ್, ಚೆರ್ತಾಲಾ. ಅಲಪುರ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುಂಶಿ ಅವರೊಂದಿಗೂ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಮಾತುಕತೆ ನಡೆಸಿದರು. ದೀಪಾ ದಾಸ್ ಮುಂಶಿ ಅವರು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲೂ ಉಸ್ತುವಾರಿಯಾಗಿದ್ದಾಗ ಸಚಿವ ಝಮೀರ್ ಅಹ್ಮದ್ ಖಾನ್ ಅಲ್ಲಿನ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು.
ಝಮೀರ್ ಅಹ್ಮದ್ ಖಾನ್ ಅವರು ಮೂರು ದಿನಗಳ ಪ್ರವಾಸದಲ್ಲಿ ಕ್ಯಾಲಿಕಟ್ನಲ್ಲಿ ಗ್ರಾಂಡ್ ಮುಫ್ತಿ ಶೇಕ್ ಅಬೂಬಕರ್ ಮುಸ್ಲಿಯಾರ್(ಎಪಿ ಉಸ್ತಾದ್)ಸೇರಿದಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ಪ್ರಮುಖ ನಾಯಕರು ಮತ್ತು ವಯನಾಡ್ ಯುಡಿಎಫ್ ಅಧ್ಯಕ್ಷ ಕೆ.ಕೆ.ಅಹ್ಮದ್ ಹಾಜಿ ಅವರನ್ನು ಝಮೀರ್ ಅಹ್ಮದ್ ಖಾನ್ ಭೇಟಿ ಮಾಡಿದ್ದರು.
ಇದೇ ಸಂದರ್ಭದಲ್ಲಿ ಝಮೀರ್ ಅಹ್ಮದ್ ಖಾನ್ ಅಲೆಪ್ಪಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ವಯನಾಡಿನಲ್ಲಿ ಭೇಟಿ ಮಾಡಿ ಚರ್ಚಿಸಿದರು.