ವಯನಾಡ್ ಭೂಕುಸಿತ: ನಾಲ್ಕನೆ ದಿನದ ಶೋಧ ಕಾರ್ಯಾಚರಣೆಯಲ್ಲಿ ಒಂದೇ ಕುಟುಂಬದ ನಾಲ್ವರ ರಕ್ಷಣೆ

ಸಾಂದರ್ಭಿಕ ಚಿತ್ರ | PC : PTI
ವಯನಾಡ್: ಭೂಕುಸಿತ ಪೀಡಿತ ಚೂರಲ್ ಮಲದಲ್ಲಿ ನಡೆಯುತ್ತಿರುವ ನಾಲ್ಕನೆ ದಿನದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಡವೆಟ್ಟಿಕುನ್ನು ಗ್ರಾಮದ ಕುಟುಂಬವೊಂದರ ನಾಲ್ಕು ಮಂದಿ ತಮ್ಮ ನಿವಾಸದಲ್ಲಿ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಪಡವೆಟ್ಟಿಕುನ್ನು ಚೂರಲ್ ಮಲದಿಂದ ಸುಮಾರು ಮೂರು ಕಿಮೀ ದೂರದಲ್ಲಿದೆ. ಸೇನಾ ಪಡೆಯು ಅವರನ್ನು ಏರ್ ಲಿಫ್ಟ್ ಮಾಡಿ, ಅವರಿಗೆ ಚಿಕಿತ್ಸೆ ಒದಗಿಸಲು ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡುತ್ತಿದೆ ಎಂದು onmanorama.com ವರದಿ ಮಾಡಿದೆ.
ಈ ಕುಟುಂಬದ ಓರ್ವ ವ್ಯಕ್ತಿಯನ್ನು ಜಾನಿ ಎಂದು ಗುರುತಿಸಲಾಗಿದ್ದು, ಆತ ಈ ಪ್ರದೇಶದಲ್ಲಿ ತೋಟ ಹೊಂದಿದ್ದಾನೆ ಎಂದು ಮೆಪ್ಪಾಡಿ ಪಂಚಾಯತ್ ನ ಪ್ರತಿನಿಧಿಗಳು ತಿಳಿಸಿದ್ದಾರೆ.
ಸೇನೆಯ ಇತ್ತೀಚಿನ ಮಾಹಿತಿ ಪ್ರಕಾರ, ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಈ ಪೈಕಿ ಬಾಲಕಿಯೊಬ್ಬಳ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಈ ಭೀಕರ ದುರಂತದಲ್ಲಿ ನಾಲ್ವರು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂಬ ಸುದ್ದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ಹಗಲಿರುಳೂ ತೊಡಗಿಕೊಂಡಿರುವ ರಕ್ಷಣಾ ಸಿಬ್ಬಂದಿಗಳು ಹಾಗೂ ಸ್ಥಳೀಯ ನಿವಾಸಿಗಳ ಪಾಲಿಗೆ ಸಂತಸ ತಂದಿದೆ.





