ಪದ್ಮ ಪ್ರಶಸ್ತಿಗೆ ನಟ ಮಮ್ಮುಟ್ಟಿ ಅವರನ್ನು ಆಯ್ಕೆ ಮಾಡಿಲ್ಲ ಯಾಕೆ?: ವಿ.ಡಿ. ಸತೀಶನ್
ನಟ ಮಮ್ಮುಟ್ಟಿ,ವಿ.ಡಿ. ಸತೀಶನ್ | Photo: X
ತಿರುವನಂತಪುರ: ಪದ್ಮ ಪ್ರಶಸ್ತಿ ಘೋಷಣೆ ಮಾಡುವಾಗ ನಟ ಮಮ್ಮುಟ್ಟಿ ಸೇರಿದಂತೆ ಪ್ರತಿಭಾವಂತ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಕೇರಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ರವಿವಾರ ಆರೋಪಿಸಿದ್ದಾರೆ.
ಇದುವರೆಗೆ ಪದ್ಮ ಪ್ರಶಸ್ತಿ ಪಡೆಯದ ಖ್ಯಾತ ಸಾಹಿತಿಗಳಾದ ಟಿ. ಪದ್ಮನಾಭನ್, ಎಂ.ಕೆ. ಸಾನು, ಸಾರಾ ಜೋಸೆಫ್, ಗಾಯಕಿ ಸುಜಾತಾ ಮೋಹನ್ ಹಾಗೂ ಇತರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿ ಕಾಂಗ್ರೆಸ್ ನಾಯಕ ಸತೀಶನ್ ಅವರು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಹಾಕಿದ್ದಾರೆ. ಈ ಪ್ರಶಸ್ತಿ ಅರ್ಹರಿಗೆ ತಲುಪಿದಾಗ ಮಾತ್ರ ಅದರ ಗೌರವ ಹೆಚ್ಚಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಾಧಾರಣ ಶ್ರೇಷ್ಠತೆ, ಸ್ವಾತಂತ್ರ್ಯ ಪ್ರಜ್ಞೆ, ಉದಾತ್ತ ಚಿಂತನೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದ ಹಲವು ವ್ಯಕ್ತಿಗಳಿದ್ದಾರೆ. ಆದರೆ, ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಅವರಿಗೆ ಸ್ಥಾನ ನೀಡುವಲ್ಲಿ ವಿಫಲರಾಗಿದ್ದೇವೆ ಎಂದು ಅವರು ಗಮನ ಸೆಳೆದರು.
ನಟರಾದ ಚಿರಂಜೀವಿ ಅವರಿಗೆ ಪದ್ಮವಿಭೂಷಣ, ಮಿಥುನ್ ಚಕ್ರವರ್ತಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ ಎಂಬ ಸುದ್ದಿ ಓದಿದ ಕೂಡಲೇ ತನಗೆ ಮಮ್ಮುಟ್ಟಿ ಅವರ ನೆನಪಾಯಿತು. ಪದ್ಮವಿಭೂಷಣ ಅಥವಾ ಪದ್ಮ ಭೂಷಣಕ್ಕೆ ಭಾರತದ ನಟರ ಹೆಸರನ್ನು ಪರಿಗಣಿಸುವುದಾದರೆ, ಅದರಲ್ಲಿ ಮೊದಲ ಹೆಸರು ಮಮ್ಮುಟ್ಟಿ ಅವರದ್ದಾಗಿರಬೇಕಿತ್ತು. ಅದರಲ್ಲಿ ಯಾವುದೇ ಸಂದೇಹ ಬೇಡ ಎಂದು ಅವರು ಹೇಳಿದ್ದಾರೆ.
ಪದ್ಮ ಪ್ರಶಸ್ತಿ ಘೋಷಣೆಯಲ್ಲಿ ಖ್ಯಾತ ಕವಿ-ಸಾಹಿತಿ ಶ್ರೀಕುಮಾರನ್ ತಂಬಿ ಅವರನ್ನು ಕಡೆಗಣಿಸಿರುವ ಬಗ್ಗೆ ಸತೀಶನ್ ಪ್ರಶ್ನಿಸಿದ್ದಾರೆ.
ಈ ಬಾರಿ ಪದ್ಮ ಪ್ರಶಸ್ತಿಗೆ ಕೇರಳದಿಂದ ಬಿಜೆಪಿಯ ಹಿರಿಯ ನಾಯಕ ಒ. ರಾಜಗೋಪಾಲ್ ಹಾಗೂ ರಾಜಮನೆತನದ ಸದಸ್ಯೆ ಅಶ್ವದಿ ತಿರುನಾಳ್ ಗೌರಿ ಲಕ್ಷ್ಮೀ ಬಾಯಿ ಅವರನ್ನು ಆಯ್ಕೆ ಮಾಡಲಾಗಿದೆ.