ಬಿಹಾರದಲ್ಲಿ ಮತ ಕಳ್ಳತನ ಮಾಡಲು ಬಿಜೆಪಿ, ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ: ರಾಹುಲ್ ಗಾಂಧಿ

ರಾಹುಲ್ ಗಾಂಧಿ (Photo: PTI)
ಪಾಟ್ನಾ: “ದೇಶದಾದ್ಯಂತ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತ ಕಳ್ಳತನ ನಡೆದಿದೆ. ನಮ್ಮ ಹೋರಾಟ ಸಂವಿಧಾನವನ್ನು ಉಳಿಸುವ ಹೋರಾಟವಾಗಿದ್ದರೆ, ಆರೆಸ್ಸೆಸ್ ಹಾಗೂ ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹಿನ್ನೆಲೆಯಲ್ಲಿ, ‘ಮತ ಕಳ್ಳತನ’ ವಿರುದ್ಧ ಆಯೋಜಿಸಿರುವ ‘ಮತದಾರರ ಅಧಿಕಾರ ಯಾತ್ರೆ’ಗೆ ರವಿವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಹಾರದಲ್ಲಿ ಮತ ಕಳ್ಳತನ ಮಾಡಲು ಬಿಜೆಪಿ ಮತ್ತು ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ. ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎಂದು ಘೋಷಿಸಿದರು.
ಬಿಜೆಪಿ ನಾಯಕರು ಚುನಾವಣಾ ಆಯೋಗವನ್ನು ಉಪಯೋಗಿಸಿಕೊಂಡು ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಸಾವಿರಾರು ಹೆಸರುಗಳನ್ನು ಅಳಿಸಿ ಹಾಕಿದ್ದು, ಹೊಸ ಹೆಸರುಗಳನ್ನು ಸೇರಿಸುವ ಮೂಲಕ ಮತ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ವೋಟ್ ಚೋರಿ ವಿಷಯ ಎತ್ತಿದ ತಕ್ಷಣವೇ ನನ್ನಿಂದ ಅಫಿಡವಿಟ್ ಕೇಳುವ ಆಯೋಗ, ಇದೇ ವಿಚಾರದಲ್ಲಿ ಬಿಜೆಪಿ ನಾಯಕರನ್ನು ಪ್ರಶ್ನಿಸುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದ ಸಸಾರಾಮ್ನಿಂದ ಆರಂಭವಾದ ಈ ಯಾತ್ರೆಯಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಅನೇಕ ಪ್ರಮುಖ ನಾಯಕರು ಭಾಗವಹಿಸಿದರು. ರಾಜ್ಯದಾದ್ಯಂತ 16 ದಿನಗಳು ಸಾಗುವ ಈ ಯಾತ್ರೆ, ಸುಮಾರು 1,300 ಕಿಲೋಮೀಟರ್ ಸಾಗಿ ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಸಮಾರೋಪಗೊಳ್ಳಲಿದೆ.







