ಖರೀದಿಸಿದ ಕಲ್ಲಂಗಡಿ ಉತ್ತಮವೆಂದು ತಿಳಿಯುವುದು ಹೇಗೆ?

Picture: Pexels
ಮುಂಬೈನಲ್ಲಿ 2026 ಎಪ್ರಿಲ್ 26ರಂದು ಒಂದೇ ಕುಟುಂಬದ ನಾಲ್ವರು ಕಲ್ಲಂಗಡಿ ತಿಂದು ಸಾವಿಗೀಡಾದ ದುರಂತ ವರದಿಯಾಗಿದೆ. ಕಲ್ಲಂಗಡಿ ತಿಂದ ಕೆಲವೇ ಸಮಯದಲ್ಲಿ ವಾಂತಿ, ತಲೆ ತಿರುಗುವುದು ಮತ್ತು ಹೊಟ್ಟೆ ನೋವು ಲಕ್ಷಣಗಳು ಕಾಣಿಸಿಕೊಂಡಿದ್ದವು. 24 ಗಂಟೆಗಳೊಳಗೆ ನಾಲ್ವರೂ ನಿಧನರಾದರು. ಹೀಗಾಗಿ ಕಲ್ಲಂಗಡಿ ಸೇವನೆ ಕುರಿತು ಊಹಾಪೋಹಗಳು ಹರಡಿವೆ.
ಸಂಬಂಧಿತ ಅಧಿಕಾರಿಗಳು ವಿಷಯದ ತನಿಖೆ ನಡೆಸುತ್ತಿದ್ದಾರೆ. ಹಣ್ಣಿನಲ್ಲಿ ವಿಷ ಬೆರೆಸಿರುವ ಸಾಧ್ಯತೆ, ಅದರ ಸಂಗ್ರಹಣೆ ಹೇಗೆ ಆಗಿದೆ ಮತ್ತು ಹೇಗೆ ನಿಭಾಯಿಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಏಷ್ಯನ್ ಆಸ್ಪತ್ರೆಯ ಅಮೆರಿಹೆಲ್ತ್ ಹೋಮ್ ಹೆಲ್ತ್ ಕೇರ್ನ ಪ್ಯಾಲಿಯೇಟಿವ್ ಕೇರ್ ಮತ್ತು ಜಿರಿಯಾಟ್ರಿಕ್ಸ್ ವಿಭಾಗದ ಸಲಹಾ ವೈದ್ಯರಾದ ಡಾ. ಚಾರು ದತ್ ಆರೋರಾ ಅವರ ಪ್ರಕಾರ, ಹಣ್ಣಿನ ಸೇವನೆಯಿಂದ ಮಾರಕ ಪರಿಣಾಮಗಳು ಅತ್ಯಂತ ಅಪರೂಪ. ಹೀಗಾಗಿ ಹಣ್ಣಿನಲ್ಲಿ ಗಂಭೀರ ಮಾಲಿನ್ಯವಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ದೃಷ್ಟಿಯಿಂದ ನೋಡಿದರೆ, ಇಂತಹ ಪ್ರಕರಣಗಳು ಹೆಚ್ಚಿನ ಸಂದರ್ಭಗಳಲ್ಲಿ ಆಹಾರದಿಂದ ಹರಡುವ ರೋಗಾಣುಗಳು, ರಾಸಾಯನಿಕ ಕಲಬೆರಕೆ ಅಥವಾ ಅನುಚಿತ ಸಂಗ್ರಹಣೆಯ ಪರಿಣಾಮವಾಗಿರುತ್ತವೆ. “ಹೆಚ್ಚಿನ ಸುತ್ತುವರಿದ ತಾಪಮಾನ, ವಿಶೇಷವಾಗಿ ಶಾಖದ ಅಲೆಗಳ ಸಂದರ್ಭದಲ್ಲಿ, ಸೂಕ್ಷ್ಮಜೀವಿಗಳ ಬೆಳವಣಿಗೆ ಮತ್ತು ವಿಷದ ಉತ್ಪಾದನೆ ವೇಗಗೊಳ್ಳುತ್ತದೆ. ಇದು ತೀವ್ರ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈಗಿನ ಪ್ರಕರಣವು ಬೇಸಿಗೆಯ ತಿಂಗಳುಗಳಲ್ಲಿ ಆಹಾರ ನೈರ್ಮಲ್ಯ, ಸುರಕ್ಷಿತವಾಗಿ ಖರೀದಿ ಮತ್ತು ಸರಿಯಾದ ಸಂಗ್ರಹಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ” ಎಂದು ಅವರು ತಿಳಿಸಿದ್ದಾರೆ.
“ಕಲ್ಲಂಗಡಿ ಹಣ್ಣಿನಲ್ಲಿ ಅತ್ಯಧಿಕ ನೀರಿನಂಶ (ಸುಮಾರು 90%) ಮತ್ತು ತಟಸ್ಥ PH ಇರುತ್ತದೆ. ಇದು ಮಾಲಿನ್ಯಗೊಂಡಿದ್ದರೆ, ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಒದಗಿಸುತ್ತದೆ. ಸಾಲ್ಮೊನೆಲ್ಲಾ, ಎಸ್ಚೆರಿಚಿಯಾ ಕೋಲಿ ಅಥವಾ ಲಿಸ್ಟೀರಿಯೋಸಿಸ್ನಂತಹ ರೋಗಾಣುಗಳು ತೀವ್ರ ಗ್ಯಾಸ್ಟ್ರೋಎಂಟರೈಟಿಸ್, ಸೆಪ್ಸಿಸ್ ಅಥವಾ ಬಹು ಅಂಗ ವೈಫಲ್ಯಕ್ಕೆ ಕಾರಣವಾಗಬಹುದು. ವಯೋವೃದ್ಧರು, ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ಅಪಾಯಕ್ಕೊಳಗಾಗುತ್ತಾರೆ” ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿಯಾಗಿ, ರಾಸಾಯನಿಕ ಮಾಲಿನ್ಯಕಾರಕಗಳು ಅಥವಾ ವಿಷಕಾರಿ ವಸ್ತುಗಳನ್ನು ಕಲ್ಲಂಗಡಿಗೆ ಇಂಜೆಕ್ಟ್ ಮಾಡಿದಲ್ಲಿ ಯಕೃತ್ತು, ಮೂತ್ರಪಿಂಡಗಳು ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕಲ್ಲಂಗಡಿ ಮಲಿನವಾಗಿದೆ ಎಂದು ತಿಳಿಯುವುದು ಹೇಗೆ?
ಕಲ್ಲಂಗಡಿ ಖರೀದಿಸುವ ಮೊದಲು ಈ ಕೆಳಗಿನ ಮೂಲಭೂತ ತಪಾಸಣೆಗಳನ್ನು ಅನುಸರಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ:
* ಬಿರುಕುಗಳು, ಗಾಯಗಳು ಅಥವಾ ಹಾನಿಗೊಳಗಾದ ಸಿಪ್ಪೆಯಿರುವ ಕಲ್ಲಂಗಡಿಗಳನ್ನು ಖರೀದಿಸಬೇಡಿ. ಅವುಗಳಲ್ಲಿ ಸೂಕ್ಷ್ಮಾಣುಗಳು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ.
* ಅಸಹಜವಾಗಿ ಅತಿ ಕೆಂಪು ಬಣ್ಣ, ಲೋಳೆಯಂತಿರುವ ತಿರುಳು ಅಥವಾ ಅಹಿತಕರ ವಾಸನೆ ಹೊಂದಿರುವ ಕಲ್ಲಂಗಡಿಯನ್ನು ತಪ್ಪಿಸಿ.
* ಸರಳ ಪರೀಕ್ಷೆ: ತಿರುಳನ್ನು ಹತ್ತಿಯಿಂದ ಉಜ್ಜಿದಾಗ ಕೃತಕ ಬಣ್ಣ ಹೊರಬಂದರೆ, ಅದು ಕಲಬೆರಕೆಯ ಸೂಚನೆಯಾಗಿರಬಹುದು.
* ಕಲ್ಲಂಗಡಿ ಕತ್ತರಿಸುವ ಮೊದಲು ಹೊರಗಿನ ಮೇಲ್ಮೈಯನ್ನು ಚೆನ್ನಾಗಿ ತೊಳೆಯಿರಿ. ಇಲ್ಲವಾದರೆ ಮೇಲ್ಮೈಯಲ್ಲಿರುವ ಬ್ಯಾಕ್ಟೀರಿಯಾಗಳು ಒಳಗೆ ಪ್ರವೇಶಿಸುವ ಸಾಧ್ಯತೆ ಇದೆ.
* ದೀರ್ಘಕಾಲ (>30°C) ಶಾಖಕ್ಕೆ ಒಡ್ಡಿದಲ್ಲಿ ಮತ್ತು ಕತ್ತರಿಸಿದ ನಂತರ ಬ್ಯಾಕ್ಟೀರಿಯಾದ ಪ್ರಮಾಣ ವೇಗವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಸರಿಯಾದ ಸಂಗ್ರಹಣೆ ಅತ್ಯಂತ ಮುಖ್ಯ.
ಕಲ್ಲಂಗಡಿಯನ್ನು ಹೇಗೆ ಮಲಿನಗೊಳಿಸಲಾಗುತ್ತದೆ?
* ಹಣ್ಣಿನ ಕೆಂಪು ಬಣ್ಣ ಹೆಚ್ಚಿಸಲು ಕೃತಕ ಬಣ್ಣಗಳನ್ನು ಇಂಜೆಕ್ಟ್ ಮಾಡುವುದು
* ರಾಸಾಯನಿಕ ಸಿಹಿಕಾರಕಗಳು ಅಥವಾ ಸಕ್ಕರೆ ದ್ರಾವಣಗಳನ್ನು ಬಳಕೆ ಮಾಡುವುದು
* ಅಸಿಟಿಲಿನ್ ಅನಿಲವನ್ನು ಬಿಡುಗಡೆ ಮಾಡುವ ಕ್ಯಾಲ್ಸಿಯಂ ಕಾರ್ಬೈಡ್ನಂತಹ ಮಾಗಿಸುವ ಏಜೆಂಟ್ ಗಳ ಬಳಕೆ — ಇವುಗಳಿಂದ ಅರ್ಸೆನಿಕ್ ಅಥವಾ ಫಾಸ್ಫರಸ್ ಸಂಯುಕ್ತಗಳು ಹಣ್ಣಿನಲ್ಲಿ ಸೇರಿ ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳಿಗೆ ಕಾರಣವಾಗಬಹುದು






