ಟಿಪ್ಪು ಯುಗದ ಆಡಳಿತ, ಕೃಷಿ ಮತ್ತು ಉದ್ಯಮ
ಇಂದು ಟಿಪ್ಪು ಜಯಂತಿ

Photo: wikipedia.org
ಲೇಖಕ ಮಿತ್ರ ಉಡುಪಿಯ ಕೆ.ಪಣಿರಾಜ್ ಭಾರತದಲ್ಲಿ ಇತಿಹಾಸ ಸೃಷ್ಟಿಯಾಗುವ ಎರಡು ಬಗೆಯ ಮಾರ್ಗಗಳನ್ನು ಗುರುತಿಸುತ್ತಾರೆ. ಅವುಗಳೆಂದರೆ, ಒಂದು ಜನಪದೀಯ ಮಾರ್ಗ, ತಾವು ಬದುಕಿದ್ದ ಕಾಲಘಟ್ಟದಲ್ಲಿ ಜನಸಾಮಾನ್ಯರ ಮತ್ತು ದಮನಿತರ ಪರವಾಗಿ ಹೋರಾಡಿದ ದೊರೆ ಅಥವಾ ಸಾಮ್ರಾಟನನ್ನು ನಮ್ಮ ಜನಪದರು ತಮ್ಮ ಅಲಿಖಿತ ಕಾವ್ಯಗಳ ಮೂಲಕ ಅಂದರೆ ಮೌಖಿಕ ಕಾವ್ಯ ಮತ್ತು ಲಾವಣಿಗಳ ಮೂಲಕ ಕೃತಜ್ಞಾಪೂರ್ವಕವಾಗಿ ಸ್ಮರಿಸಿಕೊಂಡಿರುವ ಇತಿಹಾಸ. ಇಂತಹ ನೈಜ ಇತಿಹಾಸಗಳಲ್ಲಿ ದ್ವೇಷ, ಅಸೂಯೆಗಳಿಲ್ಲದೆ ನಿಷ್ಕಲ್ಮಷ ಪ್ರೀತಿಯನ್ನು ಮಾತ್ರ ನಮ್ಮ ಪ್ರಾಚೀನ ಜಗತ್ತಿನ ಅನಕ್ಷರಸ್ಥರು ಮೌಖಿಕ ಕಾವ್ಯದ ಮೂಲಕ ಕಟ್ಟುಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರುವ ಇನ್ನೊಂದು ಇತಿಹಾಸವೆಂದರೆ ಪುರಾಣ ಮತ್ತು ಐತಿಹ್ಯಗಳ ಮಾರ್ಗ. ದಮನಿತರು ಮತ್ತು ಜನಸಾಮಾನ್ಯರ ಪರವಾಗಿ ನಿಂತು ಮೇಲ್ವರ್ಗದ ಪಟ್ಟಭದ್ರ ಹಿತಾಸಕ್ತಿಗಳ ಬೇರುಗಳನ್ನು ಅಲುಗಾಡಿಸಿದ ದೊರೆಗಳನ್ನು ಅಕ್ಷರ ಬಲ್ಲ ಸಮುದಾಯದ ಮಂದಿ ತಮ್ಮ ಮೂಗಿನ ನೇರಕ್ಕೆ ಹಾಗೂ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸೇಡಿನ ವಿದ್ಯಮಾನವಾಗಿ ಬಣ್ಣಿಸುತ್ತಾ ನೈಜ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ತಂತ್ರ ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.
ನಾವೀಗ ಬದುಕುತ್ತಿರುವ ವರ್ತಮಾನದ ಜಗತ್ತಿನಲ್ಲಿ ಈಗ ಎರಡನೇ ಬಗೆಯ ಪೊಳ್ಳು ಇತಿಹಾಸ ಚಾಲ್ತಿಯಲ್ಲಿದೆ. ಆಶ್ಚರ್ಯಕರ ಸಂಗತಿಯೆಂದರೆ, ಟಿಪ್ಪು ಆಳಿದ ನೆಲದಲ್ಲಿ ಹುಟ್ಟಿ ಬೆಳೆದ ನಾನು(ಮಂಡ್ಯ ಜಿಲ್ಲೆ) ಹತ್ತನೇ ವಯಸ್ಸಿನಿಂದ ಈ ಜಗತ್ತನ್ನು ಗ್ರಹಿಸಲು ಆರಂಭಿಸಿದ ನಂತರದವರೆಗೆ ಮೈಸೂರು ಅಥವಾ ಮಂಡ್ಯ ಜಿಲ್ಲೆಯ ಸೀಮೆಯಲ್ಲಿ ಟಿಪ್ಪು ಕುರಿತಂತೆ ಈವರೆಗೆ ಒಂದೇ ಒಂದು ಅಪಸ್ವರವನ್ನು ಕೇಳಿಲ್ಲ. ಟಿಪ್ಪು ಸುಲ್ತಾನ್ ಸೆರೆಹಿಡಿದು ತಂದು ಬಲಾತ್ಕಾರವಾಗಿ ಮತಾಂತರಿಸಿದ ಎಂದು ಹೇಳುವ ಒಂದೇ ಒಂದು ಜೀವ ಅಥವಾ ಸಮುದಾಯ ಈವರೆಗೆ ನನ್ನ ಕಣ್ಣಿಗೆ ಬಿದ್ದಿಲ್ಲ. ( ಟಿಪ್ಪು ಸೇನೆಯಲ್ಲಿ ಚೇಲಾ ರೆಜಿಮೆಂಟ್ ಎಂದು ಸೈನಿಕರ ಶಾಖೆಯೊಂದು ಅಸ್ತಿತ್ವದಲ್ಲಿತ್ತು. ಇದರಲ್ಲಿ ಟಿಪ್ಪು ವಿರುದ್ಧ ಯುದ್ಧದಲ್ಲಿ ಸೋತು ಶರಣಾದ ಸೈನಿಕರು ಮತ್ತು ದೇವದಾಸಿ ಹಾಗೂ ವೃತ್ತಿ ನಿರತ ವೇಶ್ಯೆಯರ ಗಂಡು ಮಕ್ಕಳು ಸ್ವಇಚ್ಛೆಯಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ಅಂತಹವರನ್ನು ಸೇನೆಯ ಸಹಾಯಕ್ಕೆ ನಿಯೋಜಿಸಿ ಚೇಲಾ ರೆಜಿಮೆಂಟ್ ಎಂದು ನಾಮಕರಣ ಮಾಡಿದ್ದ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ.) ಆದರೆ, ಇದಕ್ಕೆ ಪ್ರತಿಯಾಗಿ ಶ್ರೀರಂಗಪಟ್ಟಣವನ್ನು ಆಳುತ್ತಾ ಹೈದರಲಿ ಮತ್ತು ಟಿಪ್ಪು ಸುಲ್ತಾನ್ ನನ್ನ ನೆಲಕ್ಕೆ ಪರಿಚಯಿಸಿದ ಭತ್ತದ ತಳಿಗಳು, ಕಬ್ಬಿನ ತಳಿಗಳು, ಬಾಳೆ, ತೆಂಗು, ಮಾವು, ರೇಷ್ಮೆ ಇವೆಲ್ಲವೂ ಇಂದಿಗೂ ಅಸ್ತಿತ್ವದಲ್ಲಿವೆ.
ನನ್ನೂರು ಕೊಪ್ಪ ಗ್ರಾಮದಲ್ಲಿ ಕೆರೆಯ ಏರಿಯ ಕೆಳಗಿನ ತೆಂಗಿನ ತೋಟದಲ್ಲಿ ನಾನು ಜನಿಸುವ ಒಂದು ವರ್ಷಕ್ಕೆ ಮುನ್ನ ಅಂದರೆ 1955ರಲ್ಲಿ ನಿಧನ ಹೊಂದಿದ ಮದ್ದನಹಟ್ಟಿ ನಂಜೇಗೌಡ ಎಂಬ ಹೆಸರಿನ ನನ್ನಜ್ಜ ಬೆಳೆಸಿದ ತೆಂಗು, ಮಾವು ಹಾಗೂ ಹುಣಸೆ ಮರಗಳು ಇಂದಿಗೂ ಫಲ ನೀಡುತ್ತಿವೆ. ಹೀಗೆ ನಮ್ಮ ಕಣ್ಣೆದುರಿಗಿನ ಇಂತಹ ಕಟು ವಾಸ್ತವ ಸಂಗತಿಗಳನ್ನು ಇಟ್ಟುಕೊಂಡು ಟಿಪ್ಪು ಕುರಿತು ಅವಹೇಳನಕಾರಿ ಮಾತನಾಡುವುದೆಂದರೆ ಅದು ಆತ್ಮವಂಚನೆಯ ಕೆಲಸವಾಗುತ್ತದೆ.
ಕನ್ನಡದ ಹಿರಿಯ ವಿದ್ವಾಂಸರಾದ ತಿ.ತಾ. ಶರ್ಮಾ, ವೀರಕೇಸರಿ ಸೀತಾರಾಮಶಾಸ್ತ್ರಿ, ಕೋ.ಚೆನ್ನಬಸಪ್ಪ, ಪ್ರೊ. ಶೇಕ್ ಅಲಿ ಹಾಗೂ ಮೈಸೂರು ಮೂಲದ ನಮ್ಮ ಹಿರಿಯ ಮಿತ್ರರಾಗಿದ್ದುಕೊಂಡು, ಪ್ರಖರ ಚಿಂತಕರಾಗಿದ್ದ ದಿ. ಸಾಕೇತ್ ರಾಜನ್ ಇಂಗ್ಲಿಷ್ ಭಾಷೆಯಲ್ಲಿ ರಚಿಸಿರುವ ‘ಮೇಕಿಂಗ್ ಹಿಸ್ಟರಿ’ ಎಂಬ ಎರಡು ಸಂಪುಟಗಳಲ್ಲಿರುವ ಮಹತ್ವದ ಕೃತಿಗಳು ನಮಗೆ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ತಂದ ಸಾಮಾಜಿಕ ಸುಧಾರಣೆಗಳು ಮಾತ್ರವಲ್ಲದೆ ಕೃಷಿರಂಗ ಮತ್ತು ರೈತರಿಗೆ ನೆರವಾದ ಪ್ರತಿಯೊಂದು ಸಂಗತಿಯೂ ಪುರಾವೆಗಳ ಮೂಲಕ ದಾಖಲಾಗಿವೆ. ಈ ಕೃತಿಗಳಿಗೆ ಪೂರಕವಾಗಿ ಈ ಭಾಗದಲ್ಲಿ ಸಂಚರಿಸಿದ ಅಬುದುಬೆ ಎಂಬ ಫ್ರಾನ್ಸ್ ಮೂಲದ ಕ್ರೈಸ್ತ ಪಾದ್ರಿ ಸಂಪಾದಿಸಿರುವ ಟಿಪ್ಪು ಕುರಿತ ಲಾವಣಿಗಳು ಹಾಗೂ ಫ್ರಾನ್ಸಿಸ್ ಬುಕಾನನ್ ಎಂಬ ಸಸ್ಯ ಶಾಸ್ತ್ರಜ್ಞ ದಕ್ಷಿಣ ಭಾರತವನ್ನು ಎತ್ತಿನ ಗಾಡಿಯಲ್ಲಿ ಪ್ರವಾಸ ಮಾಡುತ್ತಾ ದಾಖಲಿಸಿದ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೋ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಆ್ಯಂಡ್ ಮಲಬಾರ್’ ಎಂಬ ಅಮೂಲ್ಯವಾದ ಅಧ್ಯಯನ ಕೃತಿಯು ಟಿಪ್ಪು ಆಡಳಿತ ವಿವರಗಳ ಒಳನೋಟಗಳನ್ನು ನೀಡುತ್ತದೆ. ಇವುಗಳ ಜೊತೆಗೆ ಖ್ಯಾತ ಶಾಸನ ತಜ್ಞರಾದ ಬಿ.ಎಲ್. ರೈಸ್ರವರು ಸಂಗ್ರಹಿಸಿರುವ ಶಾಸನಗಳಲ್ಲಿ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಏಳುನೂರ ತೊಂಭತ್ತಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ಸಂರಕ್ಷಿಸಿ ಜೀರ್ಣೋದ್ಧಾರ ಮಾಡಿದ ಎಂಬ ವಿವರವಾದ ಪಟ್ಟಿ ದೊರೆಯುತ್ತದೆ. ಕ್ರೈಸ್ತ ಪಾದ್ರಿ ಅಬುದುಬೆಯಾಗಲಿ, ಸಸ್ಯಶಾಸ್ತ್ರಜ್ಞ ಫ್ರಾನ್ಸಿಸ್ ಬುಕಾನನ್ ಆಗಲಿ ಅಥವಾ ಶಾಸನಗಳ ತಜ್ಞ ಬಿ.ಎಲ್. ರೈಸ್ ಇವರುಗಳು ಈ ನೆಲಕ್ಕೆ, ಇಲ್ಲಿನ ಸಂಸ್ಕೃತಿಗೆ ಮತ್ತು ಇಲ್ಲಿನ ಧರ್ಮಗಳಿಗೆ ಸಂಬಂಧ ಪಟ್ಟವರಲ್ಲ. ಯಾವುದೇ ರಾಗದ್ವೇಷವಿಲ್ಲದೆ ತಮ್ಮ ಕಣ್ಣ ಮುಂದಿನ ವಾಸ್ತವ ಗಳನ್ನು ದಾಖಲಿಸಿದ್ದಾರೆ. ಇವು ಸಾಲದೆಂಬಂತೆ ಈಸ್ಟ್ ಇಂಡಿಯಾ ಕಂಪೆನಿಯ ದಾಖಲೆಗಳಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಆಡಳಿತ ಮತ್ತು ಸಾಮಾಜಿಕ, ಆರ್ಥಿಕ ಸುಧಾರಣೆಗಳು ಭಾರತದ ಇತರ ಸಂಸ್ಥಾನಗಳಿಗಿಂತ ಹೇಗೆ ಭಿನ್ನವಾಗಿ ದ್ದವು ಮತ್ತು ಮಾದರಿಯಾಗಿದ್ದವು ಎಂಬ ಮಾಹಿತಿ ಇಂದಿಗೂ ನಮಗೆ ಲಭ್ಯವಿದೆ. (ನೋಡಿ- ರಿಪೋರ್ಟ್ ಆಫ್ ಜಾಯಿಂಟ್ ಕಮಿಷನ್ ಫ್ರಂ ಬೆಂಗಾಲ್, ಬಾಂಬೆ ಆ್ಯಂಡ್ ಮದ್ರಾಸ್- ಪ್ರಕಟಣೆಯ ವರ್ಷ1862) ಈ ಎಲ್ಲಾ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಟಿಪ್ಪು ಸುಲ್ತಾನನ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ, ನಾವು ಈವರೆಗೆ ಕಾಣದ ಟಿಪ್ಪುವಿನ ಹಲವು ಬಗೆಯ ಮಾನವಿಕ ಮುಖಗಳು ಮತ್ತು ಅಭಿವೃದ್ಧಿಯ ಕನಸುಗಳು ಅನಾವರಣಗೊಳ್ಳುತ್ತವೆ. ಇಡೀ ಭಾರತದಲ್ಲಿ ಕೃಷಿಗೆ ಸಂಬಂಧಿಸಿದಂತೆ 127 ಕಾನೂನುಗಳನ್ನು ತನ್ನ ಸಂಸ್ಥಾನದಲ್ಲಿ ಜಾರಿಗೆ ತಂದ ಏಕೈಕ ದೊರೆ ಟಿಪ್ಪು ಸುಲ್ತಾನ್ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ.
ಹೈದರಲಿ ಮತ್ತು ಟಿಪ್ಪು ಸುಲ್ತಾನ್ ತಂದೆ ಮಗ ಇಬ್ಬರ ಒಟ್ಟು ಆಡಳಿತಾವಧಿ ಕೇವಲ 38 ವರ್ಷಗಳು. ಈ ಅವಧಿಯಲ್ಲಿ ಬ್ರಿಟಿಷರೊಡನೆ ನಾಲ್ಕು ಯುದ್ಧಗಳು ಸೇರಿದಂತೆ, ಸ್ಥಳೀಯ ಸಾಮಂತರು, ಪಾಳೆಗಾರರು ಮತ್ತು ಮರಾಠರು, ಪೇಶ್ವೆಗಳು ತಮಿಳುನಾಡಿನ ಸಂಸ್ಥಾನಗಳಾದ ಆರ್ಕಾಟ್, ಪುದುಕೋಟೈ, ತಂಜಾವೂರು ದೊರೆಗಳ ಜೊತೆ ನಿರಂತರ ಕಾದಾಡಿರು. ಇಂತಹ ಹೋರಾಟಗಳ ನಡುವೆ ಕರ್ನಾಟಕದ ಉತ್ತರದ ಕೃಷ್ಣಾ ನದಿಯಿಂದ ದಕ್ಷಿಣದ ಕೇರಳದ ಮಲಬಾರ್ ಹಾಗೂ ಕೊಚ್ಚಿನ್ ಮತ್ತು ಪೂರ್ವದ ಕಾಂಚಿಪುರಂ, ಪಶ್ಚಿಮದ ಮಂಗಳೂರು ವರೆಗಿನ ತಮ್ಮ ಸಾಮ್ರಾಜ್ಯದ (ಒಟ್ಟು ಈಗಿನ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 144 ಜಿಲ್ಲೆಗಳ ವ್ಯಾಪ್ತಿಯ ಪ್ರದೇಶ) ಕೃಷಿ ಮತ್ತು ಔದ್ಯಮಿಕ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಅವರು ಶ್ರಮಿಸಿದ ಪರಿ ಅಚ್ಚರಿ ಮೂಡಿಸುತ್ತದೆ.
ತಮ್ಮ ಸಂಸ್ಥಾನದ ಅಭಿವೃದ್ಧಿಗೆ ಮುನ್ನ ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಮಾಡಿದ ಮಹತ್ಕಾರ್ಯವೆಂದರೆ, ನಾಡಿನುದ್ದಕ್ಕೂ ತಲೆ ಎತ್ತಿ ರೈತರನ್ನು ಮತ್ತು ವ್ಯಾಪಾರಸ್ಥರನ್ನು ಶೋಷಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಪಾಳೆಗಾರರನ್ನು ಸದೆ ಬಡಿದರು. ಹತ್ತರಿಂದ ಐವತ್ತು ಹಳ್ಳಿಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡು, ಬೆಟ್ಟ ಮತ್ತು ಗುಡ್ಡಗಳಲ್ಲಿ ಕೋಟೆ ಮತ್ತು ಅರಮನೆ ಕಟ್ಟಿಕೊಂಡು ಶ್ಯಾನುಭೋಗ ಮತ್ತು ಪಟೇಲರು ಹಾಗೂ ಊರ ಗೌಡ ಅಥವಾ ನಾಡಗೌಡ ಎಂಬ ಜಮೀನ್ದಾರರ ಮೂಲಕ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದ ಪಾಳೆಗಾರರನ್ನು ತಲೆ ಎತ್ತದಂತೆ ನಿರ್ನಾಮ ಮಾಡಿದರಲ್ಲದೆ, ಬಾಡಿಗೆ ಅಥವಾ ಭೂ ಕಂದಾಯದಿಂದ ವಿನಾಯಿತಿ ಪಡೆದಿದ್ದ ಹಲವು ಬ್ರಾಹ್ಮಣ ಮಠಗಳು, ಅಗ್ರಹಾರಗಳು, ಜೈನ ಬಸದಿಗಳು ಮತ್ತು ಉತ್ತರ ಕರ್ನಾಟಕದ ದೇಶಮುಖ್ ಎಂಬ ಬ್ರಾಹ್ಮಣರ ಅಧೀನದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು 1787ರಿಂದ 1790ರ ಅವಧಿಯಲ್ಲಿ ಟಿಪ್ಪು ಸುಲ್ತಾನ್ ವಾಪಸ್ ಪಡೆದು ಗೇಣಿದಾರರಿಗೆ ಹಂಚಿದನು. ಹೈದರಲಿ ಅನಕ್ಷರಸ್ಥನಾಗಿದ್ದುಕೊಂಡು ಓರ್ವ ಸಾಮಾನ್ಯ ಸಿಪಾಯಿಯಾಗಿ ಸೈನ್ಯಕ್ಕೆ ಸೇರಿ ಓರ್ವ ಸಾಮಂತನಾಗಿ ಬೆಳೆದವನು. ಜೊತೆಗೆ ತನ್ನ ಪುತ್ರ ಟಿಪ್ಪುವಿಗೆ ಆತನ ಹದಿನೇಳನೆಯ ವಯಸ್ಸಿನಿಂದ ಯುದ್ಧ ತಂತ್ರಗಳ ಜೊತೆ ಜೊತೆ ಯಲ್ಲಿ ಆಡಳಿತ ಕಲೆಯನ್ನು ಧಾರೆಯೆರೆದವನು.
ನಂಜನಗೂಡಿನ ಅಗ್ರಹಾರದಲ್ಲಿ ನಾನೂರು ಬ್ರಾಹ್ಮಣ ಕುಟುಂಬಗಳ ವಶದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಏಳುನೂರು ಹಿಂದುಳಿದ ಕುಟುಂಬಗಳಿಗೆ ಜಾತಿ ಮತ್ತು ಧರ್ಮದ ಹಂಗಿಲ್ಲದೆ ಟಿಪ್ಪು ಸುಲ್ತಾನ್ ಹಂಚಿದನು. ಮೂಡುಬಿದಿರೆಯ ಜೈನ ಬಸದಿ ವಶದಲ್ಲಿದ್ದ ಭೂಮಿಯನ್ನು ಮತ್ತು ಉತ್ತರ ಕರ್ನಾಟಕದ ದೇಶ್ಮುಖ್ಗಳ ಭೂಮಿಯನ್ನು ಅವರ ಜೀವನದ ಅವಶ್ಯಕತೆಗೆೆ ಬೇಕಾಗುವಷ್ಟು ಮಾತ್ರ ಉಳಿಸಿ, ಉಳಿದ ಭೂಮಿಯನ್ನು ಎಲ್ಲರಿಗೂ ಸಮನಾಗಿ ಹಂಚಿದನು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದು ಟಿಪ್ಪುವಿನ ಅಚಲ ನಂಬಿಕೆಯಾಗಿತ್ತು. ಇದು ಮಾತ್ರವಲ್ಲದೆ, ಪಾಳು ಬಿದ್ದ ಭೂಮಿ, ಗುಡ್ಡಗಾಡು ಪ್ರದೇಶಗಳನ್ನು ಯಾವುದೇ ಕಂದಾಯ ಅಥವಾ ತೆರಿಗೆ ಇಲ್ಲದ ಭೂ ರಹಿತರಿಗೆ ಹಂಚಿದ ಸಂಗತಿಯನ್ನು ನಿಕಲಸ್ ಗುಹಾ ಎಂಬವರು ದಾಖಲಿಸಿದ್ದಾರೆ. ಸೈನಿಕರು ಸೇರಿದಂತೆ 60 ಸಾವಿರ ಕುಟುಂಬಗಳಿಗೆ ಭೂಮಿಯನ್ನು ಹಂಚುವುದರ ಮೂಲಕ ತನ್ನ ಸಾಮ್ರಾಜ್ಯದಲ್ಲಿ ಕೃಷಿಗೆ ಒತ್ತು ನೀಡಿರುವ ಸಂಗತಿಯನ್ನು ದಾಖಲಿಸಿದ್ದಾರೆ.
ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಅವಧಿಯಲ್ಲಿ ಬೇಳೆಕಾಳುಗಳು, ಭತ್ತ, ಕಬ್ಬು, ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು, ಗೋಡಂಬಿ, ವೀಳ್ಯದ ಎಲೆ, ಶ್ರೀಗಂಧ ಮರ ಇವುಗಳ ಕೃಷಿಗೆ ಹೆಚ್ಚು ಒತ್ತು ನೀಡಲಾಗಿತ್ತು. 1800ರಿಂದ 1802ರ ಅವಧಿಯ ತಮ್ಮ ಪ್ರವಾಸದಲ್ಲಿ ಬುಕಾನನ್ ಪಟ್ಟಿ ಮಾಡಿರುವಂತೆ ಟಿಪ್ಪು ಸಂಸ್ಥಾನದಲ್ಲಿ ಪಟ್ಟಣಗಳು ಮತ್ತು ಅಷ್ಟಗ್ರಾಮಗಳು ಎಂಬ ಆಯ್ದ ಪ್ರದೇಶಗಳಲ್ಲಿ ಒಟ್ಟು 15 ಜಾತಿಯ ವಿವಿಧ ಹಣ್ಣಿನ ತಳಿಗಳು, 34 ಬಗೆಯ ವಿವಿಧ ತರಕಾರಿ ಬೆಳೆಗಳು ಅಸ್ತಿತ್ವದಲ್ಲಿದ್ದವು. ಇದರಲ್ಲಿ ಪ್ರಮುಖವಾಗಿ ಬೆಂಗಳೂರು ನಗರದ ಲಾಲ್ ಬಾಗ್ ಸೇರಿದಂತೆ ನಾಲ್ಕು ತೋಟಗಳಲ್ಲಿ ಔಷಧೀಯ ಸಸ್ಯಗಳು, ಗಿಡಮೂಲಿಕೆಯ ಬೇರುಗಳು ಮತ್ತು ಹಣ್ಣು, ತರಕಾರಿ ಹಾಗೂ ಆಲಂಕಾರಿಕ ಸಸ್ಯಗಳನ್ನು ಪ್ರತ್ಯೇಕವಾಗಿ ಬೆಳೆಯುತ್ತಿದ್ದ ಅಂಶವನ್ನು ಬುಕಾನನ್ ಒತ್ತಿ ಹೇಳಿದ್ದಾನೆ. ಎಲೆಯ ತೋಟ, ಹಣ್ಣಿನ ತೋಟ, ತೆಂಗಿನ ತೋಟ ಮತ್ತು ಹೂವಿನ ತೋಟಗಳೆಂದು ಇವುಗಳನ್ನು ಕರೆಯಲಾಗುತ್ತಿತ್ತು.
ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯಲ್ಲಿ ಒಟ್ಟು 39 ಲಕ್ಷ ಎಕರೆ ಪ್ರದೇಶದಲ್ಲಿ ಎಂಟು ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದ್ದನ್ನು ಮತ್ತು ನಾಡಿನುದ್ದಕ್ಕೂ ಕೆರೆ, ಕಟ್ಟೆಗಳನ್ನು ಕಟ್ಟಿಸಿರುವ ಇತಿಹಾಸವನ್ನು ಬುಕಾನನ್ ತನ್ನ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾನೆ. 1790ರ ದಶಕದಲ್ಲಿ ಕಾವೇರಿನದಿಗೆ ಅಣೆಕಟ್ಟನ್ನು ನಿರ್ಮಿಸಲು ಕನಸು ಕಂಡು, ಈಗಿನ ಕೃಷ್ಣರಾಜ ಸಾಗರ ಜಲಾಶಯ ಇರುವ ಸ್ಥಳದಲ್ಲಿ ಪ್ರಥಮ ಬಾರಿಗೆ ಶಿಲಾನ್ಯಾಸ ನೆರೆವೇರಿಸಿದವನು ಟಿಪ್ಪು ಸುಲ್ತಾನ್ ಎಂಬುದು ಕಾವೇರಿ ನದಿಯ ಇತಿಹಾಸ ಬಲ್ಲವರಿಗೆ ತಿಳಿದಿರುವ ಸಂಗತಿಯಾಗಿದೆ. ಪಾಂಡುವಪುರ ಮತ್ತು ಮೇಲುಕೋಟೆಯ ನಡುವೆ ಬರುವ ಕೆರೆತೊಣ್ಣೂರು ಎಂಬ ಗ್ರಾಮದಲ್ಲಿ ಹೈದರಲಿ ನಿರ್ಮಿಸಿರುವ ಬೃಹತ್ತಾದ ಕೆರೆ ತಂದೆ ಮತ್ತು ಮಗನ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಹುಣಸೂರು ಪಟ್ಟಣದ ಮಗ್ಗುಲಲ್ಲಿ ಹರಿಯುವ ಲಕ್ಷ್ಮ್ಮಣ ತೀರ್ಥ ನದಿಯ ನೀರು ಒಳಗೊಂಡಂತೆ ಕಾವೇರಿಯ ಉಪನದಿಗಳಾದ ಶಿಂಷಾ, ಲೋಕಪಾವನಿ, ಕಪಿಲಾ ನದಿಗಳ ನೀರನ್ನು ನಾಲೆಯ ಮೂಲಕ ಬಳಸಿಕೊಂಡು ಕೊಳ್ಳೆಗಾಲ ಸೇರಿದಂತೆ ಮೈಸೂರು ನಗರದ ಸುತ್ತ ಮುತ್ತ ಕೆರೆಯಾಶ್ರಿತ ಭೂಮಿಯಲ್ಲಿ ಭತ್ತ ವನ್ನು ಬೆಳೆಯಲಾಗುತ್ತಿತ್ತು. ಇವುಗಳಲ್ಲಿ ಬಂಗಾರ ಸಣ್ಣ ಮತ್ತು ರಾಜಮುಡಿ ಎಂಬ ತಳಿಗಳು ಪ್ರಮುಖವಾಗಿದ್ದವು. ಬೇಸಾಯದ ವಿಷಯದಲ್ಲಿ ಹೈದರಲಿ ಮತ್ತು ಟಿಪ್ಪು ಇಬ್ಬರೂ ವಾಣಿಜ್ಯ ಬೆಳೆಗಳಿಗೆ ಮಹತ್ವವನ್ನು ನೀಡಿದ್ದರು. ರೈತರಿಗೆ ಕಬ್ಬು, ತೆಂಗು, ಅಡಿಕೆ, ಗೋಡಂಬಿ, ಮೆಣಸು ಮತ್ತು ಏಲಕ್ಕಿ, ಬಾಳೆ ಹಾಗೂ ವೀಳ್ಯದ ಎಲೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದರು.
ಕರಾವಳಿ ಪ್ರದೇಶಗಳಿಗೆ ಅಡಿಕೆ, ತೆಂಗು ಮತ್ತು ಗೋಡಂಬಿ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ತೆಂಗು, ಅಡಿಕೆ ಬೆಳೆಗಾರರಿಗೆ ಮೊದಲ ಏಳು ವರ್ಷಗಳ ಕಾಲ ಭೂ ಕಂದಾಯದಿಂದ ವಿನಾಯಿತಿ ನೀಡುವುದರ ಜೊತೆಗೆ ಮಿಶ್ರ ಬೆಳೆಯ ಪದ್ಧತಿಗೆ ಪ್ರೋತ್ಸಾಹ ನೀಡಲಾಗಿತ್ತು. ರೈತರ ಕೃಷಿ ಉತ್ಪನ್ನಗಳ ಸುಗಮ ಮಾರಾಟಕ್ಕಾಗಿ ಪ್ರತೀ ಹತ್ತರಿಂದ ಹದಿನೈದು ಕಿಲೊಮೀಟರ್ ದೂರಕ್ಕೆ ವಾರದ ಸಂತೆಗಳನ್ನು ಟಿಪ್ಪು ಆಳ್ವಿಕೆಯಲ್ಲಿ ಆರಂಭಿಸಲಾಯಿತು. ರೈತರು ಭೂಮಿಯ ಕಂದಾಯ ಅಥವಾ ತೆರಿಗೆಯನ್ನು ಪಣಂ ಎಂದು ಕರೆಯಯಲಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ಮೂಲಕ ಪಾವತಿಸುತ್ತಿದ್ದರು. ಇಡೀ ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿ ಇದ್ದದ್ದು ಟಿಪ್ಪುವಿನ ಸಂಸ್ಥಾನದಲ್ಲಿ ಮಾತ್ರ ಎಂಬುದು ಗಣನೀಯವಾದ ಅಂಶ. ಉಳಿದ ಸಂಸ್ಥಾನಗಳಲ್ಲಿ ರೈತರು ದವಸ ಧಾನ್ಯಗಳ ಮೂಲಕ ತೆರಿಗೆ ಪಾವತಿ ಮಾಡುತ್ತಿದ್ದರು. ಟಿಪ್ಪುಸುಲ್ತಾನ್ ತನ್ನ ಸಂಸ್ಥಾನದಲ್ಲಿ ಪಾಳು ಬಿದ್ದಿದ್ದ ಮೂರು ಲಕ್ಷ ಎಕರೆ ಭೂಮಿಯನ್ನು ತನ್ನ ಸೈನಿಕ ಕುಟುಂಬಗಳಿಗೆ ಹಂಚಿರುವುದು ವಿಶೇಷವಾಗಿದೆ. ಪಟೇಲ ಅಥವಾ ನಾಡಗೌಡನ ಹುದ್ದೆಯಲ್ಲಿರಬೇಕಾದರೆ, ಆ ವ್ಯಕ್ತಿಯು ಕೃಷಿಯಲ್ಲಿ ನಿರತನಾಗಿರಬೇಕು ಎಂಬ ನಿಯಮವನ್ನು ಜಾರಿಗೆ ತಂದನು. ಇದರಿಂದಾಗಿ ಟಿಪ್ಪುವಿನ ಆಳ್ವಿಕೆಯಲ್ಲಿ ಜಾತಿ ಭೇದವಿಲ್ಲದೆ ಬಹುತೇಕ ಸಮುದಾಯಗಳು ಅದರಲ್ಲೂ ವಿಶೇಷವಾಗಿ ದಲಿತರು ಮತ್ತು ಮುಸ್ಲಿಮ್ ಸಮುದಾಯದ ಮಂದಿ ಕೃಷಿಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು. ಇಂದಿಗೂ ಮಳವಳ್ಳಿ, ಬನ್ನೂರು, ಟಿ.ನರಸಿಪುರ ತಾಲೂಕು, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಮಂಡ್ಯ ತಾಲೂಕುಗಳಲ್ಲಿ ಕೃಷಿಯನ್ನು ವೃತ್ತಿಯಾಗಿಸಿಕೊಂಡ ದಲಿತ ಹಾಗೂ ಮುಸ್ಲಿಮ್ ಕುಟುಂಬಗಳನ್ನು ಕಾಣಬಹುದು.
ಬೆಲ್ಲ ಹಾಗೂ ಖಂಡಸಾರಿ ಸಕ್ಕರೆ ತಯಾರಿಸಲು ಕಬ್ಬಿನ ಬೆಳೆಗೆ ಪ್ರೋತ್ಸಾಹ ನೀಡಿದ್ದ ಟಿಪ್ಪು ಸುಲ್ತಾನ್ ತಮಿಳುನಾಡಿನಿಂದ ಪಟಾವಳಿ ಎಂಬ ಚಿಕ್ಕ ಚಿಕ್ಕ್ಕ ಗೇಣಿನ, ದಪ್ಪ ಕಾಂಡದ ಹಾಗೂ ಅಧಿಕ ರಸ ನೀಡುವ ತಮಿಳುನಾಡು ಮೂಲದ ಕಬ್ಬಿನ ತಳಿಯನ್ನು ಮಂಡ್ಯ ಜಿಲ್ಲೆಯ (ಆಗಿನ ಅವಿಭಜಿತ ಮೈಸೂರು ಪ್ರಾಂತ) ನೀರಾವರಿ ಪ್ರದೇಶದಲ್ಲಿ ಪರಿಚಯಿಸಿದ್ದನು. ಶ್ರೀರಂಗಪಟ್ಟಣದ ಸಮೀಪದ ಪಾಲಹಳ್ಳಿ ಗ್ರಾಮದಲ್ಲಿ ಖಂಡಸಾರಿ ಸಕ್ಕರೆಯ ಕಾರ್ಖಾನೆಯ ಅವಶೇಷಗಳು ಇಂದಿಗೂ ಇರುವುದು ವಿಶೇಷ.
ಬ್ರಿಟಿಷ್ ಲೈಬ್ರರಿಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಗೂಢಚರರ ಮೂಲಕ ಟಿಪ್ಪು ಮತ್ತು ಫ್ರೆಂಚರ ನಡುವೆ ನಡೆದಿರುವ ಪತ್ರ ವ್ಯವಹಾರ, ಟಿಪ್ಪು ಸಂಸ್ಥಾನದ ಉದ್ಯಮಗಳ ಕುರಿತಂತೆ ಕಲೆ ಹಾಕಿದ ಮಾಹಿತಿಗಳು ದೊರೆತಿದ್ದು, ಈ ಮಾಹಿತಿಯ ಪ್ರಕಾರ ಟಿಪ್ಪು ಸುಲ್ತಾನ್ ಫ್ರಾನ್ಸ್ ದೊರೆಗೆ ಮನವಿ ಸಲ್ಲಿಸಿ, ಉಕ್ಕು, ಕಬ್ಬಿಣದ ತಜ್ಞರು, ಮದ್ದು ಗುಂಡು ತಯಾರಕರು, ಸಕ್ಕರೆ, ಗಾಜು, ಪಿಂಗಾಣಿ ತಯಾರಿಕೆಯ ತಜ್ಞರು ಹೀಗೆ ಹತ್ತು ವಿವಿಧ ಬಗೆಯ ಉದ್ಯಮಗಳಲ್ಲಿ ನುರಿತರಾದವರನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡ ಮಾಹಿತಿ ಲಭ್ಯವಾಗಿದೆ. ಚೆನ್ನಪಟ್ಟಣದಲ್ಲಿ ಕರಕುಶಲ ತಯಾರಿಕೆ, ಕೊಯಮತ್ತೂರಿನಲ್ಲಿ ಕೈ ಮಗ್ಗ ಮತ್ತು ಕಲ್ಲು ಸಕ್ಕರೆ, ಶ್ರೀರಂಗಪಟ್ಟಣದಲ್ಲಿ ಸಕ್ಕರೆ, ಉಕ್ಕು ತಯಾರಿಕೆ, ದೇವರಾಯನ ದುರ್ಗದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ಕಬ್ಬಿಣ ತಯಾರಿಕೆ, ಸತ್ಯಮಂಗಲ ದಲ್ಲಿ ರೇಷ್ಮೆಯ ಕೈಮಗ್ಗಗಳು, ಕೊಚ್ಚಿನ್ನಲ್ಲಿ ಗೋಡಂಬಿ ಸಂಸ್ಕರಣಾ ಘಟಕಗಳು ಕಾರ್ಯನಿರತವಾಗಿದ್ದವು. ಚೀನಾದಿಂದ ರೇಷ್ಮೆ ಕೃಷಿಯ ಮಾಹಿತಿಯನ್ನು ತರಿಸಿಕೊಂಡು ರೇಷ್ಮೆ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಟಿಪ್ಪು ಸುಲ್ತಾನ್ ಪಶ್ಚಿಮ ಬಂಗಾಳದಿಂದ ರೇಷ್ಮೆ ಹುಳಗಳನ್ನು ಬಹುರುದ್ದೀನ್ ಮತ್ತು ಕಸ್ತೂರಿ ರಂಗ ಎಂಬ ಇಬ್ಬರು ರಾಯಭಾರಿಗಳ ಮೂಲಕ ತರಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. 1786ರಲ್ಲಿ ಹೈದರಾಬಾದ್ ನಿಜಾಮನೊಡನೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಸೆಪ್ಟಂಬರ್ 27ರಂದು ಯುದ್ಧಭೂಮಿಯಿಂದ ಶ್ರೀರಂಗಪಟ್ಟಣದ ಕೋಟೆಯ ಸೇನಾಪತಿಗೆ ಪತ್ರ ಬರೆದು ರೇಷ್ಮೆ ಹುಳಗಳನ್ನು ಜತನದಿಂದ ಕಾಪಾಡಬೇಕೆಂದು ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದನು. ಇದಲ್ಲದೆ ತನ್ನ ಸಂಸ್ಥಾನದ ಮಳವಳ್ಳಿ, ಚೆನ್ನಪಟ್ಟಣ, ದೊಡ್ಡಬಳ್ಳಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 21 ಪ್ರದೇಶಗಳಲ್ಲಿ ರೇಷ್ಮೆ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದ್ದನು. ಶ್ರೀರಂಗಪಟ್ಟಣ, ಮೇಲುಕೋಟೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಕ್ಕರೆ ಘಟಕಗಳನ್ನು ಸ್ಥಾಪಿಸಿದ್ದನು.
ಪಿರಿಯಾಪಟ್ಟಣ ಮತ್ತು ಮಹಾರಾಯನ ದುರ್ಗದ ಭೂಮಿಯಲ್ಲಿ ಶ್ರೇಷ್ಠ ಗುಣಮಟ್ಟದ ಶ್ರೀಗಂಧದ ಮರಗಳನ್ನು ಬೆಳೆಯಲಾಗುತ್ತಿತ್ತು. ಇದಲ್ಲದೆ ರೈತರಿಗೆ ಶ್ರೀಗಂಧ ಹಾಗೂ ಜಾಲಿ (ಗೊಬ್ಬಳಿ) ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿ ಮರದ ಬೆಲೆಯನ್ನು ಸಂಪೂರ್ಣವಾಗಿ ಅವರಿಗೆ ಪಾವತಿಸಲಾಗುತ್ತಿತ್ತು. ಶ್ರೀರಂಗಪಟ್ಟಣದ ಗಂಜಾಂನಲ್ಲಿ ಗೊಬ್ಬಳಿ ಅಥವಾ ಜಾಲಿ ಮರದಿಂದ ಎತ್ತಿನ ಬಂಡಿಗಾಗಿ ಮರದ ಚಕ್ರಗಳು ಮತ್ತು ಫಿರಂಗಿ ಸಾಗಿಸುವ ಬಂಡಿಗಳನ್ನು ತಯಾರು ಮಾಡಲಾಗುತ್ತಿತ್ತು. ಅತ್ಯಂತ ಗಟ್ಟಿಮುಟ್ಟಾದ ಜಾಲಿಮರದಿಂದ ಚಕ್ರಗಳನ್ನು ತಯಾರಿಸುವ ಕುಶಲ ಕರ್ಮಿಗಳ ಕುಟುಂಬಗಳು ಗಂಜಾಂನಲ್ಲಿ ಈಗಲೂ ಅದೇ ವೃತ್ತಿಯನ್ನು ಮುಂದುವರಿಸಿದ್ದಾರೆ.
ಒಂದು ಕಾಲದಲ್ಲಿ ಬೆಂಗಳೂರು ಹೊರವಲಯದ ಮಾವಳ್ಳಿ ಎಂಬ ಗ್ರಾಮ ಹೈದರ್ ಮತ್ತು ಟಿಪ್ಪು ಕಾಲದಲ್ಲಿ ಕೃಷಿಗೆ ಆಯ್ಕೆ ಮಾಡಿಕೊಂಡ ಅಷ್ಟ ಗ್ರಾಮಗಳಲ್ಲಿ ಒಂದಾಗಿತ್ತು. ತಂದೆ ಮಗ ಇಬ್ಬರೂ ಅಭಿವೃದ್ಧಿ ಪಡಿಸಿದ ತೆಂಗು ಮತ್ತು ಹಣ್ಣಿನ ತೋಟ ಈಗ ಲಾಲ್ಬಾಗ್ ಹೆಸರಿನಲ್ಲಿ ಜಗತ್ ಪ್ರಸಿದ್ಧ ಸಸ್ಯ ಕಾಶಿಯಾಗಿ ಹೆಸರು ಪಡೆದಿದೆ. ಟಿಪ್ಪು ಕಾಲಾನಂತರ ಬೆಂಗಳೂರು ನಗರಕ್ಕೆ ಬ್ರಿಟಿಷ್ ಅಧಿಕಾರಿಯಾಗಿ ಬಂದ ಮಾರ್ಕ್ ಕಬ್ಬನ್ ಇದರ ರೂವಾರಿಯಲ್ಲಿ ಒಬ್ಬನಾಗಿದ್ದಾನೆ.
ಟಿಪ್ಪುವಿನ ಅಧಿಕಾರದ ಅವಧಿಯಲ್ಲಿ ಸಂಸ್ಥಾನಕ್ಕೆ ಬರುತ್ತಿದ್ದ ದವಸ ಧಾನ್ಯಗಳನ್ನು ಹೇಗೆ ಸಮನಾಗಿ ಎಲ್ಲರಿಗೂ ಹಂಚಲಾಗುತ್ತಿತ್ತು ಎಂಬುದನ್ನು ಬುಕಾನನ್ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. ಒಂದು ಖಂಡುಗ ಅಥವಾ 1,920 ಸೇರುಗಳು ಎಂಬ ಅಳತೆಯಲ್ಲಿ, ಸರಕಾರಕ್ಕೆ 192 ಸೇರು, ಅಮಾಲ್ದಾರರ ಕಚೇರಿಯ ಎಣ್ಣೆಯ ದೀಪ ಮತ್ತು ಇತರ ಖರ್ಚಿಗೆ 24 ಸೇರು, ಬ್ರಾಹ್ಮಣರು, ಭಿಕ್ಷ್ಷುಕರು ಮತ್ತು ಫಕೀರರು ಮುಂತಾದವರಿಗೆ 12 ಸೇರು, ಕಾವಲುಗಾರನಿಗೆ 6 ಸೇರು, ಅಳತೆ ಮಾಡುವವನಿಗೆ 6 ಸೇರು ಮತ್ತು ದೇವಾಲಯದ ಪೂಜಾರಿಗೆ 24 ಸೇರು ದಿನಸಿ ಸಂದಾಯವಾಗುತ್ತಿತ್ತು. ಇವರುಗಳು ಮಾತ್ರವಲ್ಲದೆ, ತಳವಾರನಿಗೆ 24 ಸೇರು, ನೀರುಗಂಟಿಗೆ 24 ಸೇರು, ಕ್ಷೌರಿಕ, ಕಮ್ಮಾರ ಮತ್ತು ಬಡಗಿಗೆ ತಲಾ 12 ಸೇರು ಧಾನ್ಯವನ್ನು ವಿತರಿಸುತ್ತಿದ್ದನು. ತನ್ನ ಸಂಸ್ಥಾನದಲ್ಲಿ ಪಾನ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದ ಟಿಪ್ಪು ಸುಲ್ತಾನ್ ನಂತರ ದಿನಗಳಲ್ಲಿ ವಾಣಿಜ್ಯ ಬೆಳೆಗಳಾದ ಗಸ ಗಸೆ ಹಾಗೂ ತಂಬಾಕು ಬೆಳೆಯನ್ನು ನಿಷೇಧಿಸಿದ ದಾಖಲೆಗಳಿವೆ.
ಟಿಪ್ಪು ಸುಲ್ತಾನ್ ವ್ಯಕ್ತಿತ್ವ ಮತ್ತು ಸಾಧನೆಗಳ ಇತಿಹಾಸದ ದಾಖಲೆಗಳು ಅಂಕಿ ಅಂಶಗಳ ಸಮೇತ ನಮ್ಮ ಕಣ್ಣಮುಂದಿರುವಾಗ ಟಿಪ್ಪು ಸುಲ್ತಾನ್ ದೇಶ ಭಕ್ತನಲ್ಲ, ಆತ ದೇಶದ್ರೋಹಿ, ಮತಾಂಧ ಎಂದು ಕರೆಯುವ ನಕಲಿ ಇತಿಹಾಸಕಾರರು ಒಮ್ಮೆ ತಮ್ಮ ತಲೆಯೊಳಗಿನ ಕಸ ಮತ್ತು ಎದೆಯೊಳಗಿನ ವಿಷ ಎರಡನ್ನೂ ಹೊರಹಾಕಿ ಮುಕ್ತ ಮನಸ್ಸಿನಿಂದ ಇತಿಹಾಸವನ್ನು ಗ್ರಹಿಸುವ ಅಗತ್ಯವಿದೆ.







