ಅರಾವಳಿ: ಗಣಿಗಾರಿಕೆಗೆ ಅವಕಾಶ ನೀಡುವ ಕೇಂದ್ರದ ವ್ಯಾಖ್ಯಾನ ವಿರುದ್ಧ ಜನಾಕ್ರೋಶ

Photo : PTI
ಹೊಸದಿಲ್ಲಿ: ಭಾರತದ ವಿಶಾಲ ಪರ್ವತಶ್ರೇಣಿಗಳಲ್ಲೊಂದಾದ ಅರಾವಳಿ ಬೆಟ್ಟಗಳ ಕುರಿತಾಗಿ ಕೇಂದ್ರ ಸರಕಾರವು ನೀಡಿದ ವ್ಯಾಖ್ಯಾನವನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿರುವುದನ್ನು ಪ್ರತಿಭಟಿಸಿ ರಾಜಸ್ತಾನ, ಹರ್ಯಾಣ, ಗುಜರಾತ್ ಹಾಗೂ ದಿಲ್ಲಿಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಆರಂಭ ಗೊಂಡಿವೆ. 100 ಮೀಟರ್ ಗಿಂತ ಎತ್ತರದ ಬೆಟ್ಟಗಳನ್ನು ಮಾತ್ರವೇ ಅರಾವಳಿ ಪರ್ವತಸಾಲುಗಳೆಂದು ಪರಿಗಣಿಸುವ ಕೇಂದ್ರ ಸರಕಾರದ ವ್ಯಾಖ್ಯಾನವು ಪಾರಿಸಾರಿಕವಾಗಿ ಅತ್ಯಂತ ಗಂಭೀರ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಲಿವೆಯೆಂದು ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಹರ್ಯಾಣ ಸಚಿವರ ನಿವಾಸದ ಮುಂದೆ ಪ್ರತಿಭಟನೆ:
ಹರ್ಯಾಣದ ಗುರುಗ್ರಾಮದಲ್ಲಿ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ನರಬೀರ್ ಸಿಂಗ್ ಅವರ ನಿವಾಸದ ಮುಂದೆ ಪ್ರತಿಭಟನಕಾರರು ಬಿತ್ತಿಪತ್ರಗಳನ್ನು ಹಿಡಿದು,ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ‘ಅರಾವಳಿಯಿಲ್ಲದಿದ್ದಲ್ಲಿ, ಬದುಕು ಕೂಡಾ ಇಲ್ಲ’, ‘ಅರಾವಳಿ ಉಳಿಸಿ, ಭವಿಷ್ಯವನ್ನು ರಕ್ಷಿಸಿ’ ಮತ್ತಿತರ ಘೋಷಣೆಗಳನ್ನು ಕೂಗಿದರು.
ರಾಜಸ್ಥಾನದ ಉದಯಪುರದಲ್ಲಿ ನ್ಯಾಯವಾದಿಗಳು ನ್ಯಾಯಾಲಯದ ಆವರಣದಿಂದ ಜಿಲ್ಲಾಡಳಿತ ಕಚೇರಿಯವರೆಗೆ ಪಾದಯಾತ್ರೆ ನಡೆಸಿದರು ಹಾಗೂ ರಾಷ್ಟ್ರಪತಿ ಮತ್ತು ಜಿಲ್ಲಾಧಿಕಾರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಅರಾವಳಿ ಪರ್ವತದ ಕುರಿತ ಸುಪ್ರೀಂಕೋರ್ಟ್ ನಿರ್ಧಾರವು ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಕಟ್ಟಡ ನಿರ್ಮಾಣ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಮತ್ತು ಇದರಿಂದಾಗಿ ಅರಾವಳಿ ಪರ್ವತಶ್ರೇಣಿಯ ಪ್ರಕೃತಿ ಸೌಂದರ್ಯ ನಾಶವಾಗುವ ಅಪಾಯವಿದೆ. ಈ ನಿರ್ಧಾರವು ಪಾರಿಸರಿಕ ಸಮತೋಲನಕ್ಕೆ ಹಿನ್ನಡೆಯುಂಟು ಮಾಡಲಿದೆಯೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ʼಅರಾವಳಿ ಉಳಿಸಿ ಆಂದೋಲನʼ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೆಂಡಿಂಗ್ ಆಗುತ್ತಿದ್ದು, ಸಹಸ್ರಾರು ಮಂದಿ ಹ್ಯಾಷ್ಟ್ಯಾಗ್ ಗಳ ಮೂಲಕ ಚಳವಳಿಗೆ ಶಕ್ತಿ ತುಂಬುತ್ತಿದ್ದಾರೆ.
ರಾಜಸ್ಥಾನ, ಹರ್ಯಾಣ, ದಿಲ್ಲಿ ಹಾಗೂ ಗುಜರಾತ್ ರಾಜ್ಯಗಳಾದ್ಯಂತ ಹರಡಿರುವ ಅರಾವಳಿ ಪರ್ವತಶ್ರೇಣಿಯು, ಪ್ರದೇಶದ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಹಾಗೂ ಅವುಗಳನ್ನು ರಾಷ್ಟ್ರರಾಜಧಾನಿ ದಿಲ್ಲಿಯ ‘ಹಸಿರು ಶ್ವಾಸಕೋಶಗಳು’ ಎಂಬುದಾಗಿಯೂ ಕರೆಯಲಾಗುತ್ತಿದೆ.
ಕೇಂದ್ರದ ವ್ಯಾಖ್ಯಾನದಿಂದಾಗಿ ಅರಾವಳಿ ಮರುಭೂಮಿಯಾಗಲಿದೆಯೇ?:
ಅರಾವಳಿ ಪರ್ವತಗಳಿರುವ ಜಿಲ್ಲೆಗಳಲ್ಲಿನ ಯಾವುದೇ ಭೂರಚನೆಯು 100 ಮೀಟರ್ ಅಥವಾ ಅದಕ್ಕಿಂತ ಎತ್ತರವಿರುವ ಹಾಗೂ ಪರಸ್ಪರ 500 ಮೀಟರ್ ನೊಳಗಿನ ವ್ಯಾಪ್ತಿಯಲ್ಲಿರುವ ಇಂತಹ ಬೆಟ್ಟಗಳನ್ನು ಮಾತ್ರವೇ ಅರಾವಳಿ ಬೆಟ್ಟಗಳೆಂದು ಪರಿಗಣಿಸಲಾಗುವುದೆಂಬ ಕೇಂದ್ರ ಸರಕಾರದ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ಶನಿವಾರ ಸಮ್ಮತಿಸಿತ್ತು. ಈ ನೂತನ ವ್ಯಾಖ್ಯಾನದಿಂದಾಗಿ ಅರಾವಳಿ ಪರ್ವತಶ್ರೇಣಿಗಳಿರುವ ಜಿಲ್ಲೆಗಳಲ್ಲಿ ಭೂಮಟ್ಟದಿಂದ 100 ಮೀ.ಗಿಂತ ಕಡಿಮೆ ಎತ್ತರದ ಬೆಟ್ಟ,ಗುಡ್ಡಗಳನ್ನು ಸಂರಕ್ಷಣೆಯಿಂದ ಹೊರಗಿಡಲಾಗುತ್ತದೆ ಮತ್ತು ಅಲ್ಲಿ ಗಣಿಗಾರಿಕೆ,ಕೈಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ನೀಡಬಹುದಾಗಿದೆ.







