ಆಂಧ್ರಪ್ರದೇಶ | ಗ್ರಾನೈಟ್ ಗಣಿಯಲ್ಲಿ ಬಂಡೆಗಲ್ಲು ಕುಸಿದು ಕನಿಷ್ಠ ಆರು ಕಾರ್ಮಿಕರು ಮೃತ್ಯು; 10 ಮಂದಿಯ ಸ್ಥಿತಿ ಗಂಭೀರ
ಹೊಸದಿಲ್ಲಿ,ಆ.3: ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಗ್ರಾನೈಟ್ ಗಣಿಯಲ್ಲಿ ಬಂಡೆಗಲ್ಲಿನ ದೊಡ್ಡಭಾಗವೊಂದು ಕುಸಿದುಬಿದ್ದು ಕನಿಷ್ಠ ಆರು ಮಂದಿ ವಲಸೆ ಕಾರ್ಮಿಕರು ಸಾವ್ನನಪ್ಪಿದ್ದಾರೆ.
ಬಲ್ಲಿಕುರವಾ ಸಮೀಪದ ಸತ್ಯಕೃಷ್ಣ ಗ್ರಾನೈಟ್ ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಗಣಿಯಲ್ಲಿ ಬಂಡೆಗಲ್ಲು ಕುಸಿದುಬಿದ್ದಾಗ ಸ್ಥಳದಲ್ಲಿ 16 ಕಾರ್ಮಿಕರಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಆರು ಮಂದಿ ಸಾವನ್ನಪ್ಪಿದ್ದು, ಉಳಿದ 10 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಮೃತದೇಹಗಳು ದೊರೆತಿದ್ದು, ಇತದರ ಇಬ್ಬರು ಕಾರ್ಮಿಕರ ಮೃತದೇಹಗಳು ಬಂಡೆಗಲ್ಲಿನ ಅವಶೇಷಗಳ ನಡುವೆ ಸಿಲುಕಿಕೊಂಡಿವೆ. ಅವುಗಳನ್ನು ಹೊರೆತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ 10 ಗಾಯಾಳುಗಳನ್ನು ನರಸರೋಪೇಟ್ ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬಾಪಟ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕ ತುಷಾರ್ ಡಿ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಗಣಿಯಲ್ಲಿ ಸುರಕ್ಷತಾ ಕ್ರಮಗಳು ಅಸಮರ್ಪಕವಾಗಿರುವುದು ದುರಂತಕ್ಕೆ ಕಾರಣವಾಯಿತೆಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ.
ದುರಂತಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಅವಘಡದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.