ಪೈಲಟ್ಗಳ ಸಂಭಾಷಣೆ ಆಧರಿಸಿ ಯಾವುದೇ ತೀರ್ಮಾನಕ್ಕೆ ಬರಬೇಡಿ: ವಿಮಾನ ದುರಂತ ಕುರಿತ ಎಎಐಬಿ ವರದಿ ಬೆನ್ನಲ್ಲೆ ಕೇಂದ್ರ ಸರಕಾರ ಪ್ರತಿಕ್ರಿಯೆ
Photo credit: PTI
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದ ಕುರಿತು ಎಎಐಬಿ ಪ್ರಾಥಮಿಕ ವರದಿಯನ್ನಷ್ಠೇ ಬಿಡುಗಡೆ ಮಾಡಿದೆ. ಪೈಲಟ್ಗಳ ಸಂಭಾಷಣೆ ಆಧರಿಸಿ ಯಾವುದೇ ತೀರ್ಮಾನಕ್ಕೆ ಬರಬೇಡಿ. ಅಂತಿಮ ವರದಿ ಬಿಡುಗಡೆಯಾಗುವವರೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಈ ಕುರಿತು ಯಾವುದೇ ತೀರ್ಮಾನಗಳಿಗೆ ಬರಬಾರದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಜೂನ್ 12ರಂದು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಏರ್ಇಂಡಿಯಾ ವಿಮಾನ ಪತನಗೊಂಡಿತ್ತು. ವಿಮಾನದಲ್ಲಿಇಂಧನ ಸ್ವಿಚ್ ಆಫ್ ಆಗಿರುವುದರಿಂದ ಎಂಜಿನ್ಗಳಿಗೆ ಇಂಧನ ಪೂರೈಕೆಯಾಗದೆ ದುರಂತ ಸಂಭವಿಸಿದೆ ಎಂದು ಎಎಐಬಿ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ʼನಾಗರಿಕ ವಿಮಾನಯಾನ ಸಚಿವಾಲಯವು ಈ ವರದಿಯನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತಿದೆ. ಈಗ ನಾವು ಯಾವುದೇ ತೀರ್ಮಾನಕ್ಕೆ ಬರಬಾರದು. ಅಂತಿಮ ವರದಿ ಹೊರಬಂದ ನಂತರವೇ ನಾವು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಬಹುದುʼ ಎಂದು ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಪೈಲಟ್ಗಳ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವರು, ಇಡೀ ವಿಶ್ವದಲ್ಲಿ ಪೈಲಟ್ಗಳು ಮತ್ತು ಸಿಬ್ಬಂದಿಗಳ ವಿಷಯದಲ್ಲಿ ನಾವು ಅತ್ಯಂತ ಅದ್ಭುತವಾದ ಕಾರ್ಯಪಡೆಯನ್ನು ಹೊಂದಿದ್ದೇವೆ. ಪೈಲಟ್ಗಳು ಮತ್ತು ಸಿಬ್ಬಂದಿ ವಿಮಾನಯಾನ ಉದ್ಯಮದ ಬೆನ್ನೆಲುಬು ಎಂದು ಹೇಳಿದರು.
ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಈ ಕುರಿತು ಪ್ರತಿಕ್ರಿಯಿಸಿ, AAIB ಯಾವುದೇ ಹಸ್ತಕ್ಷೇಪವಿಲ್ಲದೆ ಈ ಕುರಿತು ತನಿಖೆ ನಡೆಸುತ್ತದೆ. ನಾವು ಕಪ್ಪು ಪೆಟ್ಟಿಗೆಯನ್ನು ವಿದೇಶಕ್ಕೆ ಕಳುಹಿಸಲಿಲ್ಲ. ಅದನ್ನು ನಮ್ಮ ದೇಶದಲ್ಲಿಯೇ ಡಿಕೋಡ್ ಮಾಡಲಾಗಿದೆ. ಪೈಲಟ್ಗಳ ಸಂಭಾಷಣೆಯನ್ನು ಆಧರಿಸಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಂಭಾಷಣೆ ಸಂಕ್ಷಿಪ್ತವಾಗಿತ್ತು ಎಂದು ಹೇಳಿದ್ದಾರೆ.