ತ್ರಿವೇಣಿ ಸಂಗಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಣ್ಯ ಸ್ನಾನ
ರಾಷ್ಟ್ರಪತಿ ದ್ರೌಪದಿ ಮುರ್ಮು Photo Credit | Screengrab / PTI Videos
ಲಕ್ನೋ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಸೋಮವಾರ ಪುಣ್ಯ ಸ್ನಾನ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ನಂಬಿಕೆ ಹಾಗೂ ವಿಶ್ವಾಸದ ಈ ಬೃಹತ್ ಸೇರುವಿಕೆ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಜೀವಂತ ಸಂಕೇತ ಎಂದರು.
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕ ಮುರ್ಮು ಅವರು ಗಂಗಾ ನದಿಗೆ ತೆಂಗಿನ ಕಾಯಿ ಅರ್ಪಿಸಿದರು ಹಾಗೂ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿದರು.
ಅನಂತರ ‘ಎಕ್ಸ್’ನ ಪೋಸ್ಟ್ನಲ್ಲಿ, ‘‘ಇಂದು ನನಗೆ ಪ್ರಯಾಗ್ ರಾಜ್ ನ ಮಹಾ ಕುಂಭದ ಆಧ್ಯಾತ್ಮಿಕ ವಾತಾವರಣದಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಭಾಗ್ಯ ಒದಗಿ ಬಂತು’’ ಎಂದಿದ್ದಾರೆ.
ಮಹಾಕುಂಭ ಮಾನವ ಕುಲಕ್ಕೆ ಏಕತೆ ಹಾಗೂ ಆಧ್ಯಾತ್ಮಿಕತೆಯ ಸಂದೇಶ ನೀಡಿದೆ ಎಂದು ಅವರು ಹೇಳಿದರು.
ಗಂಗಾ ಮಾತೆಯ ಆಶೀರ್ವಾದ ಎಲ್ಲರ ಮೇಲಿರಲಿ. ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ ಹಾಗೂ ಶಾಂತಿ ಹರಡಲಿ ಎಂದು ನಾನು ಗಂಗಾ ಮಾತೆಯನ್ನು ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ದ್ರೌಪದಿ ಮುರ್ಮು ಅವರು ಸಂಗಮಕ್ಕೆ ತೆರಳುವ ದಾರಿಯಲ್ಲಿ ಸೈಬೀರಿಯಾದಿಂದ ವಲಸೆ ಬರುವ ಹಕ್ಕಿಗಳ ಹಿಂಡಿಗೆ ಆಹಾರ ಧಾನ್ಯಗಳನ್ನು ಹಾಕಿದರು.