ಉಪರಾಷ್ಟ್ರಪತಿ ಅಭ್ಯರ್ಥಿಯ ಒಮ್ಮತದ ಆಯ್ಕೆಗೆ ಕಸರತ್ತು: ಡಿಎಂಕೆ, ಟಿಎಂಸಿ ಜೊತೆ ರಾಜನಾಥ್ ಸಿಂಗ್ ಮಾತುಕತೆ
Update: 2025-08-19 09:42 IST
PC: PTI
ಹೊಸದಿಲ್ಲಿ: ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರ ಉಮೇದುವಾರಿಕೆ ಬಗ್ಗೆ ಒಮ್ಮತ ಮೂಡಿಸುವ ಪ್ರಯತ್ನವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಜತೆಗೆ ದೂರವಾಣಿ ಮಾತುಕತೆ ನಡೆಸಿ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದರು.
ಅಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ಪಿ ಮುಖಂಡ ಜಗನ್ ಮೋಹನ್ ರೆಡ್ಡಿಯವರ ಜತೆಗೆ ಮಾತುಕತೆ ನಡೆಸಿದ ಅವರು, ಪಕ್ಷದ 11 ಸಂಸದರ ಬೆಂಬಲವನ್ನು ಕೋರಿದರು. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೂ ಅವರು ಮಾತುಕತೆ ನಡೆಸಿದರು.
ಮುಂಬೈನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯದ ಪ್ರಾದೇಶಿಕ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್ಸಿಪಿ ಜತೆ ಮಾತುಕತೆ ನಡೆಸಿದರು. ಶಿವಸೇನೆ 6 ಸಂಸದರನ್ನು ಮತ್ತು ಎನ್ಸಿಪಿ 10 ಸಂಸದರನ್ನು ಹೊಂದಿದೆ.