ಮನೆಗೆ ಮರಳಲು ಅವಕಾಶ ನೀಡುವಂತೆ ಆಗ್ರಹಿಸಿ ಮಣಿಪುರ ಹಿಂಸಾಚಾರ ಸಂತ್ರಸ್ತರಿಂದ ಧರಣಿ
File Photo Credit: ANI
ಇಂಫಾಲ, ನ. 30: ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡುವಂತೆ ಒತ್ತಾಯಿಸಿ ನೂರಾರು ನಿರ್ವಸಿತರು ಇಲ್ಲಿನ ರಾಜಭವನದ ಸಮೀಪ ರವಿವಾರ ಪ್ರತಿಭಟನೆ ನಡೆಸಿದ್ದಾರೆ.
2023 ಮೇಯಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಇಲ್ಲಿನ ವಿವಿಧ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಚುರಾಚಂದಪುರ, ಕಂಗ್ಪೊಕ್ಪಿ, ಇಂಫಾಲ ಪಶ್ಚಿಮ ಹಾಗೂ ಇಂಫಾಲ ಪೂರ್ವ ಜಿಲ್ಲೆಗಳ ನಿರ್ವಸಿತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈಗ ನಡೆಯುತ್ತಿರುವ ಸಾಂಗೈ ಪ್ರವಾಸೋದ್ಯಮ ಉತ್ಸವನ್ನು ಬಹಿಷ್ಕರಿಸುವಂತೆ ಅವರು ಘೋಷಣೆಗಳನ್ನು ಕೂಗಿದರು. ಅಲ್ಲದೆ, ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನಕಾರರು ‘‘ನಿರ್ವಸಿತರ ಜೀವಗಳು ಮುಖ್ಯ’, ‘‘ಜನರು ಸಂಗೈ ಉತ್ಸವವನ್ನು ಬಹಿಷ್ಕರಿಸುತ್ತಾರೆ’’, ‘‘ಹಕ್ಕು ಮೊದಲು, ಪ್ರವಾಸೋದ್ಯಮ ಅನಂತರ’’, ‘‘ನಮ್ಮ ಮೂಲಭೂತ ಹಕ್ಕುಗಳಿಗೆ ಖಾತರಿ ನೀಡಿ’’ ಎಂದು ಬರೆದೆ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡಿದ್ದರು.
ರಾಜಭವನದಿಂದ ಸುಮಾರು 200 ಮೀಟರ್ಗಳ ದೂರದಲ್ಲಿರುವ ಕಂಗ್ಲೆ ಗೇಟಿನ ಸಮೀಪ ಭದ್ರತಾ ಪಡೆ ಪ್ರತಿಭಟನಕಾರರನ್ನು ತಡೆದು ನಿಲ್ಲಿಸಿತು. ಅನಂತರ ಪ್ರತಿಭಟನಕಾರರು ಇಂಫಾಲ ಪಶ್ಚಿಮ ಜಿಲ್ಲೆಯ ಉರಿಪೋಕ್ ಪ್ರದೇಶದತ್ತ ರ್ಯಾಲಿ
ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.