×
Ad

ಸಾರಿಗೆ ಕ್ಷೇತ್ರದ ಯೋಜನೆ ಮತ್ತು ಕಣ್ಗಾವಲಿಗೆ ಹೊಸ ಕೇಂದ್ರೀಯ ಏಜೆನ್ಸಿ

Update: 2025-10-09 09:29 IST

ಹೊಸದಿಲ್ಲಿ: ಇತರ ಮುಂದುವರಿದ ದೇಶಗಳ ಮಾದರಿಯಲ್ಲಿ ಭಾರತದಲ್ಲಿ ಕೂಡಾ ಸಾರಿಗೆ ಕ್ಷೇತ್ರದ ಸಮಗ್ರ ಯೋಜನೆ ರೂಪಿಸುವ ಮತ್ತು ವಲಯದ ಮೇಲೆ ನಿಗಾ ಇರಿಸುವ ಕೇಂದ್ರೀಯ ಏಜೆನ್ಸಿಯೊಂದನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಮಂದಿ ಸಂಪುಟ ದರ್ಜೆ ಸಚಿವರು ಮತ್ತು ಅವರ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಂಪುಟ ಕಾರ್ಯಾಲಯದಲ್ಲಿ ಗತಿ-ಶಕ್ತಿ ಸಾರಿಗೆ ಯೋಜನೆ ಮತ್ತು ಸಂಶೋಧನಾ ಸಂಸ್ಥೆ (GTPRO) ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬರಲಿದ್ದು, ಉತ್ತಮ ಸಮನ್ವಯಕ್ಕಾಗಿ ಕಾರ್ಯದಶಿ ಮಟ್ಟದ ಅಧಿಕಾರಿಯೊಬ್ಬರು ಇದರ ಮುಖ್ಯಸ್ಥರಾಗಿರುತ್ತಾರೆ. ಕಳೆದ 11 ವರ್ಷಗಳಲ್ಲಿ 50 ಲಕ್ಷ ಕೋಟಿ ರೂಪಾಯಿ ಹೂಡಿಕೆ ಕಂಡಿರುವ ಸಾರಿಗೆ ಕ್ಷೇತ್ರದ ಮೂಲಸೌಕರ್ಯ ಯೋಜನೆಯನ್ನು ರೂಪಿಸುವಲ್ಲಿ ಇರುವ ತಡೆಗಳನ್ನು ನಿವಾರಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ಕೇಂದ್ರೀಯ ಸಂಸ್ಥೆಯು ಎಲ್ಲೆಡೆಯಿಂದ ಅಂಕಿ ಅಂಶ ಮತ್ತು ಸಂಶೋಧನಾ ಫಲಿತಾಂಶಗಳನ್ನು ಪಡೆದು ಮಾಸ್ಟರ್ ಪ್ಲಾನ್ ಗೆ ಚಾಲನೆ ನೀಡಲಿದೆ ಹಾಗೂ ಪ್ರಗತಿಯ ಮೇಲೆ ನಿಗಾ ವಹಿಸಲಿದೆ.

ಪ್ರಸ್ತುತ ಯೋಜನಾ ವ್ಯವಸ್ಥೆ ಸಲಹೆ ಆಧರಿತ ವ್ಯವಸ್ಥೆಯಾಗಿದ್ದು, ಸಚಿವಾಲಯಗಳು ಮತ್ತು ರಾಜ್ಯಗಳ ಜತೆ ಕನಿಷ್ಠ ಸಹಭಾಗಿತ್ವ ಇದೆ. ಜತೆಗೆ ಯೋಜನೆ ಮತ್ತು ಅನುಷ್ಠಾನವನ್ನು ಸುಧಾರಿಸುವ ನಿಟ್ಟಿನಲ್ಲಿ ನೀತಿ ಪ್ರತಿಪಾದನೆ ಅಥವಾ ಕಾಯ್ದೆಗಳು, ನಿಯಮಾವಳಿಗಳಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಶಿಫಾರಸ್ಸು ಮಾಡುವ ಕೇಂದ್ರೀಯ ಸಮಿತಿ ಇಲ್ಲ ಎಂಬ ಕಾರಣಕ್ಕೆ ಹೊಸ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News