ತಿರುಪತಿ ಸಮೀಪ ಭೀಕರ ಅಪಘಾತ | ಟೆಂಪೋ ಟ್ರಾವೆಲರ್ಗೆ ಲಾರಿ ಢಿಕ್ಕಿ: ಕರ್ನಾಟಕದ ಮೂವರ ಮೃತ್ಯು; 12 ಜನರಿಗೆ ಗಾಯ
pc : newindianexpress.com
ತಿರುಪತಿ: ಇಲ್ಲಿಗೆ ಸಮೀಪದ ಅನ್ನಮಯ್ಯ ಜಿಲ್ಲೆಯ ಕುರಬಳಕೋಟ ಮಂಡಲದ ಚೆನ್ನಾಮರ್ರಿ ಮಿಟ್ಟ ಎಂಬಲ್ಲಿ ಸೋಮವಾರ ಬೆಳಗಿನ ಜಾವ ಅತಿವೇಗಿ ಲಾರಿಯೊಂದು ಟೆಂಪೋ ಟ್ರಾವೆಲರ್ಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಮೂವರು ದಾರುಣ ಸಾವನ್ನಪ್ಪಿದ್ದು, ಇತರ 12 ಜನರು ಗಾಯಗೊಂಡಿದ್ದಾರೆ.
ಮೃತರನ್ನು ಬಾಗೇಪಲ್ಲಿ ನಿವಾಸಿಗಳಾದ ಮೇಘರಾಜ್(17), ಚರಣ್(17) ಮತ್ತು ಶ್ರಾವಣಿ(28) ಎಂದು ಗುರುತಿಸಲಾಗಿದೆ.
ಲಾರಿ ಡಿಕ್ಕಿ ಹೊಡೆದಾಗ ಟೆಂಪೋ ಟ್ರಾವೆಲರ್ ಮದನಪಲ್ಲಿಯಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿತ್ತು. ಢಿಕ್ಕಿಯ ತೀವ್ರತೆಗೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ಪೋಲಿಸರು ತಿಳಿಸಿದರು. ಟೆಂಪೋದಲ್ಲಿದ್ದವರು ತಿರುಪತಿ ದರ್ಶನ ಮುಗಿಸಿ ಊರಿಗೆ ಮರಳುತ್ತಿದ್ದರು.
ಗಾಯಾಳುಗಳನ್ನು ಮದನಪಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಪಘಾತದ ಬಳಿಕ ಲಾರಿ ಸಹಿತ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದರು.
ಆಂಧ್ರಪ್ರದೇಶದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿಯವರು ಭೀಕರ ದುರಂತದ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಗಾಯಳುಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.