ಒಆರ್ಒಪಿ ಅಧಿಸೂಚನೆ: ಬದಲಾವಣೆಗೆ ಮಾಜಿ ಯೋಧರ ಆಗ್ರಹ
Update: 2016-01-04 00:42 IST
ಹೊಸದಿಲ್ಲಿ,ಜ.3: ಮಾಜಿ ಯೋಧರ ನಿಯೋಗವೊಂದು ರವಿವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ಸಮಾನ ಶ್ರೇಣಿ ಸಮಾನ ಪಿಂಚಣಿ(ಒಆರ್ಒಪಿ) ಅಧಿಸೂಚನೆಯಲ್ಲಿ ತಿದ್ದುಪಡಿಗಳನ್ನು ಕೋರಿ ಅಹವಾಲನ್ನು ಸಲ್ಲಿಸಿತು.
ಇದೇ ವೇಳೆ ಒಆರ್ಒಪಿ ಕುರಿತು ಮಾಜಿ ಯೋಧರು ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ 203ನೆ ದಿನಕ್ಕೆ ಕಾಲಿರಿಸಿತು. ವಾಸ್ತವ ಒಆರ್ಒಪಿ ಮಂಜೂರಾಗಿಲ್ಲ ಎನ್ನುವುದನ್ನು ನಾವು ಜೇಟ್ಲಿಯವರಿಗೆ ತಿಳಿಸಿದ್ದೇವೆ. ಅಧಿಸೂಚನೆಯಲ್ಲಿ ಗಂಭೀರ ಲೋಪಗಳಿವೆ ಮತ್ತು ಅದನ್ನು ತಿದ್ದುಪಡಿಗೊಳಿಸಿ ಒಪ್ಪಿಕೊಂಡಿರುವಂತೆ ವಾಸ್ತವ ಒಆರ್ಒಪಿಯನ್ನು ಮಂಜೂರು ಮಾಡುವಂತೆ ಅವರನ್ನು ಕೋರಿದ್ದೇವೆ.
ನಮ್ಮ ಬೇಡಿಕೆಗಳ ಕುರಿತಂತೆ ರಕ್ಷಣಾ ಸಚಿವರೊಂದಿಗೆ ಮಾತನಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ನಿವೃತ್ತ ಜನರಲ್ ಸತ್ಬೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.