ಸ್ವಸಹಾಯ ಗುಂಪಿನ ಸಾಲ ಮರುಪಾವತಿಸದ ಕಾರಣಕ್ಕೆ ಮಹಿಳೆಯನ್ನು ಥಳಿಸಿ ಕೊಂದರು..!
ವಾರಣಾಶಿ, ಮಾ.9: ಮಹಿಳೆಯೊಬ್ಬರು ಸ್ವಸಹಾಯ ಗುಂಪಿನಿಂದ ಪಡೆದ ಸಾಲವನ್ನು ಮರುಪಾವತಿ ಮಾಡದ ಕಾರಣಕ್ಕಾಗಿ ಆಕೆಯನ್ನು ಇಬ್ಬರು ಮಹಿಳೆಯರು ಬಡಿದು ಕೊಂದು ಹಾಕಿರುವ ಘಟನೆ ಘಾಝಿಪುರ್ ಜಿಲ್ಲೆಯ ಬಹಾದುರ್ಗಂಜಿ ನಗರದಲ್ಲಿ ವಿಶ್ವ ಮಹಿಳಾ ದಿನವಾಗಿರುವ ಮಂಗಳವಾರ ನಡೆದಿದೆ.
ನಲುವತ್ತೆಂಟರ ಹರೆಯದ ಮಹಿಳೆ ಶಹಝಾದಿ ಎಂಬವರೇ ಮೀರಾ ವರ್ಮ ಮತ್ತು ಮುನ್ನಿ ದೇವಿ ತಂಡದಿಂದ ಪೆಟ್ಟು ತಿಂದು ಪ್ರಾಣ ಕಳೆದುಕೊಂಡವರು. ಶಹಝಾದಿ ಕೆಲವು ತಿಂಗಳ ಹಿಂದೆ ಸ್ವಸಹಾಯ ಗುಂಪಿನಿಂದ ಸಾಲ ಪಡೆದಿದ್ದರು. ಆದರೆ ಸಾಲ ಮರು ಪಾವತಿ ಮಾಡಿರಲಿಲ್ಲ.
ಮೀರಾ ಮತ್ತಿತರರು ಶಹಝಾದಿ ಮನೆಗೆ ಬಂದು ಸಾಲ ಮರು ಪಾವತಿ ಮಾಡುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಟ್ಟಿನಿಂದ ಮೀರಾ ಮತ್ತಿತರರು ಶಹಝಾದಿ ಮೇಲೆ ಹಲ್ಲೆ ನಡೆಸಿದರು. ಗಂಭೀರ ಗಾಯಗೊಂಡ ಶಹಝಾದಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆಯ ಜೀವ ಉಳಿಯಲಿಲ್ಲ.
ಈ ಸಂಬಂಧ ಶಹಝಾದಿ ಸಂಬಂಧಿಗಳು ನೀಡಿದ ದೂರಿನಂತೆ ಮಿರಾ ವರ್ಮ, ಗೋಪಾಲ ವರ್ಮ, ಗೋಲು ವರ್ಮ, ಮುನ್ನಿ ದೇವಿ, ರಾಮೇಶ್ವರ ಪ್ರಸಾದ್ ಮತ್ತು ರಾಜೇಂದ್ರ ವರ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.