×
Ad

ಪರಂಪರೆಯನ್ನು ನೆನಪಿಸುವ ಪಾರಂಪರಿಕ ಗ್ರಾಮ

Update: 2016-05-13 23:48 IST

ನ ಮ್ಮ ಹಿರಿಯರು ನಿರ್ಮಿಸಿದ ಮನೆಗಳಿಗೂ ಮತ್ತು ಜೀವನ ವಿಧಾನಕ್ಕೂ ಒಂದು ಅವಿನಾಭಾವ ಸಂಬಂಧವಿತ್ತು. ಆಯಾ ಪ್ರದೇಶದ ಭೌಗೋಳಿಕ ಹಾಗೂ ಪ್ರಾಕೃತಿಕ ವಾತಾವರಣಕ್ಕೆ ಅನುಗುಣವಾದ ಮನೆಗಳ ನಿರ್ಮಾಣ ನಡೆಯುತ್ತಿತ್ತು. ಆದರೆ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾದ ಕಾರಣ, ಹಿಂದಿನ ಹಳೆಯ ಮನೆಗಳನ್ನು ಬೀಳಿಸಿ, ಆಧುನಿಕ ರೀತಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡಗಳಿಗೂ ನಮ್ಮ ಪಾರಂಪರಿಕ ಜೀವನ ವಿಧಾನಕ್ಕೂ ಯಾವುದೇ ಹೋಲಿಕೆ ಇಲ್ಲ ಆದರೂ ಇವುಗಳ ನಿರ್ಮಾಣ ನಡೆಯುತ್ತಿದೆ.

  
ಹಳೆಯ ಪಾರಂಪರಿಕ ಮನೆಗಳು ನಾಶವಾಗುತ್ತಿದ್ದು, ಇವುಗಳ ನಿರ್ಮಾಣ ವಿಧಾನ, ಉದ್ದೇಶ ಹಾಗೂ ಅಂದಿನ ಜನರ ಜೀವನ ವಿಧಾನವನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ, ಮಣಿಪಾಲದ ನಿವೃತ್ತ ಬ್ಯಾಂಕ್ ಉದ್ಯೋಗಿ ವಿಜಯನಾಥ ಶೆಣ್ಯೆ ಅವರ ಶ್ರಮದ ಫಲವಾಗಿ, ಉಡುಪಿಯ ಮಣಿಪಾಲದ 6 ಎಕ್ರೆ ಜಾಗದಲ್ಲಿ ಪಾರಂಪರಿಕ ಕಲಾ ಗ್ರಾಮ (ಹೆರಿಟೇಜ್ ವಿಲೇಜ್) ನಿರ್ಮಾಣಗೊಂಡಿದೆ. ಅಳಿಯುವ ಹಂತದಲ್ಲಿದ್ದ ಪಾರಂಪರಿಕ ಕಟ್ಟಡಗಳು, ಅರಮನೆಗಳು, ಐತಿಹಾಸಿಕ ಮನೆಗಳನ್ನು ಮೂಲ ರೂಪದಲ್ಲಿಯೇ ಕಳಚಿ ತಂದು ಇಲ್ಲಿ ಯಥಾವತ್ತಾಗಿ ಜೋಡಿಸಲಾಗಿದೆ.
      
ರಾಜ್ಯ ಮತ್ತು ರಾಷ್ಟ್ರದ ಸುಮಾರು 1,000 ವರ್ಷಗಳ ಹಿಂದಿನ ಅವಧಿಯ ದೇವಾಲಯ, ಮನೆ ಕೂಡಾ ಈ ಪಾರಂಪರಿಕಾ ಕಲಾ ಗ್ರಾಮದಲ್ಲಿ ಮರು ರೂಪುಗೊಂಡಿದೆ. ವಿವಿಧೆಡೆ ನಾಶದ ಹಂತದಲ್ಲಿನ ಪುರಾತನ ಮನೆಗಳನ್ನು ಅದರ ಮೂಲ ರೂಪದಲ್ಲಿಯೇ ಇಲ್ಲಿ ಮರು ನಿರ್ಮಿಸಲಾಗಿದೆ. ನಾಶವಾಗಬೇಕಿದ್ದ ಮನೆಗಳಲ್ಲಿನ ದಿನನಿತ್ಯ ಬಳಕೆಯ ಸಾಮಗ್ರಿಗಳು, ಬಾಗಿಲು, ಕಿಟಕಿ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಅಲ್ಲಿಂದ ಜೋಪಾನವಾಗಿ ತಂದು ಈ ಕಲಾಗ್ರಾಮದಲ್ಲಿ ಯಾವುದೇ ಬದಲಾವಣೆ ಮಾಡದೇ ಮೂಲ ರೂಪದಲ್ಲಿಯೇ ಮರು ನಿರ್ಮಾಣಗೊಂಡಿದೆ.
   
ಈ ಪಾರಂಪರಿಕ ಗ್ರಾಮದಲ್ಲಿ ಒಟ್ಟು 28 ಪುರಾತನ ವಿವಿಧ ರೀತಿಯ ಮನೆಗಳಿದ್ದು, ಪ್ರಸ್ತುತ 8 ಮನೆಗಳನ್ನು ಸಂಪೂರ್ಣವಾಗಿ ಮರು ನಿರ್ಮಿಸಿ, ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಿಸಲಾಗಿದೆ. ಉಡುಪಿಯ ನಂದಿಕೇಶ್ವರ ದೇವಾಲಯ, ಕುಂಜೂರು ಚೌಕಿಮನೆ, ಮಂಗಳೂರಿನ ಕ್ರಿಶ್ಚಿಯನ್ ಹೌಸ್, ಕೊಡಗಿನ ಹರಿಹರ ಮಂದಿರ, ಬಿಜಾಪುರ ಜಿಲ್ಲೆಯ ಮುಧೋಳ್ ಅರಮನೆಯ ದರ್ಬಾರ್ ಸಭಾಂಗಣ, ಕೊಪ್ಪಳ ಜಿಲ್ಲೆಯ ಕೂಕನೂರಿನ ಕಮಲ್ ಮಹಲ್, ಬೀದರಿನ ದಖ್ಖನಿ ನವಾಬ್ ಮಹಲ್, ರಾಜಾ ರವಿವರ್ಮ ವಸ್ತು ಸಂಗ್ರಹಾಲಯ ಇವು ಸಂಪೂರ್ಣವಾಗಿದ್ದು ವೀಕ್ಷಣೆ ಮಾಡಬಹುದಾಗಿದೆ.
1216ನೆ ಇಸವಿಯ ಹರಿಹರ ಮಂದಿರದಲ್ಲಿ, ಸಂಪೂರ್ಣ ಮರದಿಂದ ನಿರ್ಮಿಸಿರುವ ಮಂದಿರ ಹಾಗೂ ಅದ್ಭ್ಬುತ ಕಲಾ ಚಾಕಚಕ್ಯತೆಯನ್ನು ಕಾಣಬಹುದು.
 ವಿಜಯ ನಗರ ಕಾಲದ ಸೇನಾ ದಂಡನಾಯಕ ವಾಸಿಸುತ್ತಿದ್ದ ‘ಕುಕನೂರ್ ಹೌಸ್’ ಅತ್ಯಂತ ಅದ್ಭುತ ಕಲಾ ಕುಸುರಿಯ ಮರದ ಕೆತ್ತನೆಯಿಂದ ಕೂಡಿದ್ದು, ವಿಜಯ ನಗರದ ಕಾಲದ ವೈಭವವನ್ನು ನೆನಪಿಸುತ್ತದೆ.
 1816ರ ಮುಧೋಳ್ ಪ್ಯಾಲೇಸ್ ದರ್ಬಾರ್ ಹಾಲ್‌ನಲ್ಲಿ, ದರ್ಬಾರ್ ನಡೆಯುವ ಸ್ಥಳ, ಹಳೆಯ ಫಿರಂಗಿ, ಸಾರೋಟು ಗಾಡಿಗಳು ಎಲ್ಲವನ್ನೂ ಜೋಡಿಸಲಾಗಿದೆ.

1912 ನೇ ಇಸವಿಯ ಡೆಕ್ಕನಿ ನವಾಬ್ ಮಹಲ್ ಕಟ್ಟಡದಲ್ಲಿ, ನವಾಬರು ಬಳಸುತ್ತಿದ್ದ ಸಾಮಗ್ರಿಗಳು, ಪೀಠೋಪಕರಣಗಳು, ಉರ್ದು ಗ್ರಂಥಗಳು ಎಲ್ಲವನ್ನೂ ಯಥಾವತ್ತಾಗಿ ತಂದು ಜೋಡಿಸಲಾಗಿದೆ. ನವಾಬರ ಕಾಲದ ಜೀವನವನ್ನು ನೆನಪಿಸುತ್ತದೆ. ಇಲ್ಲಿನ ರಾಜಾ ರವಿವರ್ಮ ಗ್ಯಾಲರಿಯಲ್ಲಿ ರವಿವರ್ಮ ರಚಿಸಿದ 129 ಕಲಾಕೃತಿಗಳ ಪ್ರದರ್ಶನ ಮತ್ತು ಆ ಕಾಲದ ಮುದ್ರಣ ಯಂತ್ರಗಳನ್ನೂ ಸಹ ಕಾಣಬಹುದಾಗಿದೆ.
ಮಂಗಳೂರು ಕ್ರಿಶ್ಚಿಯನ್ ಹೌಸ್‌ನಲ್ಲಿ ಪಾರಂಪರಿಕ ಕಟ್ಟಡದ ಜೊತೆ, ಹಳೆಯ ವಿಂಟೇಜ್ ಕಾರುಗಳನ್ನು ಕಾಣಬಹುದಾಗಿದೆ.

 ಉಡುಪಿ ಜಿಲ್ಲಾಡಳಿತ ಈ ಪಾರಂಪರಿಕ ಗ್ರಾಮ ನಿರ್ಮಾಣಕ್ಕೆ 6 ಎಕರೆ ಜಾಗವನ್ನು 1997 ರಲ್ಲಿ ನೀಡಿದ್ದು, 1998ರಿಂದ ಇಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕಾಗಿ ಇದುವರೆಗೂ 15 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಿದ್ದು, ಇನ್ನೂ 5 ಕೋಟಿ ರೂ. ಗಳ ಅವಶ್ಯಕತೆ ಇದೆ. ಸುಮಾರು 40 ಮಂದಿ ಬಡಗಿಗಳು ಮತ್ತು 30 ಮೇಸ್ತ್ರಿಗಳು ಈ ಗ್ರಾಮದ ನಿರ್ಮಾಣದಲ್ಲಿ ಶ್ರಮಿಸಿದ್ದಾರೆ. ಇಷ್ಟು ದಿನ ಈ ಪಾರಂಪರಿಕ ಗ್ರಾಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲವಾಗಿದ್ದು, ಪ್ರಸ್ತುತ ಈ ಗ್ರಾಮ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, 15 ಮಂದಿಯ ಒಂದು ತಂಡವಾಗಿ ದಿನಕ್ಕೆ 30 ಜನರಿಗೆ ಪ್ರವೇಶವಿದ್ದು, ರೂ.500 ಟಿಕೆಟ್ ದರ ಇದೆ. ವೆಬ್ ಸೈಟ್ ಠಿಠಿ://ಜ್ಞಿ.ಚಿಟಟಞಟಡಿ.್ಚಟಞ ಮೂಲಕ ಟಿಕೆಟ್ ಪಡೆಯಬಹುದಾಗಿದ್ದು, ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ಇರುವುದಿಲ್ಲ. 12 ವರ್ಷದ ಕೆಳಗಿನ ಮಕ್ಕಳಿಗೆ ಪ್ರವೇಶ ಇಲ್ಲ.
ಪ್ರವಾಸಿಗರಿಗೆ ಸಂಪೂರ್ಣವಾಗಿ ಸಿದ್ದಗೊಂಡಿರುವ 8 ಕಟ್ಟಡಗಳು ಮತ್ತು ರವಿವರ್ಮ ಮ್ಯೂಸಿಯಂ ಹಾಗೂ ಕಾಮಗಾರಿ ನಡೆಯುತ್ತಿರುವ 14 ಕಟ್ಟಡಗಳು ಮತ್ತು ವಿವಿಧ ರೀತಿಯ ರಸ್ತೆಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ವಾಸ್ತುತಜ್ಞ ಹರೀಶ್ ಪೈ ಮತ್ತು ಪಾರಂಪರಿಕ ಅಧ್ಯಯನಕಾರ ಥೋಮಸ್ ಗೈಡ್‌ಗಳಾಗಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

Writer - ಬಿ. ಶಿವಕುಮಾರ್, ಉಡುಪಿ

contributor

Editor - ಬಿ. ಶಿವಕುಮಾರ್, ಉಡುಪಿ

contributor

Similar News