×
Ad

ತ್ರಿಪುರಾ: 6 ಕಾಂಗ್ರೆಸ್ ಶಾಸಕರು ಟಿಎಂಸಿಗೆ ಪಕ್ಷಾಂತರ

Update: 2016-06-07 23:56 IST

ಅಗರ್ತಲಾ, ಜೂ.7: ತ್ರಿಪುರಾದಲ್ಲಿ ಕಾಂಗ್ರೆಸ್‌ನ 6 ಶಾಸಕರು ಮಂಗಳವಾರ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷವು ತ್ರಿಪುರಾದ ಆಳುವ ಸಿಪಿಎಂಗೆ ರಾಜಕೀಯ ಸವಾಲೊಂದನ್ನೆಸೆದಿದೆ.

ರಾಜ್ಯದಲ್ಲಿ ಪ್ರಮುಖ ವಿಪಕ್ಷವಾಗಿದ್ದ ಕಾಂಗ್ರೆಸ್‌ನ ಇನ್ನೊಬ್ಬ ಶಾಸಕ ಸಿಪಿಎಂಗೆ ಸೇರುವುದಕ್ಕಾಗಿ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕ ಜಿತೇನ್ ಸರ್ಕಾರ್ ಸೋಮವಾರ ಏಕಾಏಕಿ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದೊಡನೆಯೇ ರಾಜ್ಯದಲ್ಲಿ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಅನಾವರಣಗೊಳ್ಳತೊಡಗಿದೆ. ಸರ್ಕಾರ್ ಬಳಿಕ ತಾನು 2008ರಲ್ಲಿ ತ್ಯಜಿಸಿದ್ದ ಸಿಪಿಎಂ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುವ ಬಯಕೆಯನ್ನು ಘೋಷಿಸಿದ್ದಾರೆ. ಅವರ ರಾಜೀ ನಾಮೆಯಿಂದ ಮಾಜಿ ವಿಪಕ್ಷ ನಾಯಕ ಸುದೀಪ್ ರಾಯ್ ಬರ್ಮನ್‌ರ ನೇತೃತ್ವದ ಬಂಡುಕೋರ ಕಾಂಗ್ರೆಸ್ ಗುಂಪಿನ ತಿಂಗಳುದ್ದದ ಪ್ರಯತ್ನಕ್ಕೆ ಹೊಡೆತ ನೀಡಿದೆ. ಇದೇವೇಳೆ, ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದಲ್ಲಿ ಶಾಸಕ ವಿಶ್ವಬಂಧು ಸೇನ್‌ರನ್ನು ಪಿಸಿಸಿ(ಐ) ಅಧ್ಯಕ್ಷ ವಿರಾಜಿತ್ ಸಿನ್ಹಾ 6 ವರ್ಷಗಳ ಕಾಲಕ್ಕೆ ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಸೋಮವಾರ ತಡ ರಾತ್ರಿ, ಪಕ್ಷ ಸೇರ್ಪಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಂಗಳವಾರ ಮುಂಜಾನೆ ಅಗರ್ತಲಾ ತಲುಪುವಂತೆ ಬಂಡುಕೋರರು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್‌ಯವರನ್ನು ಆಗ್ರಹಿಸಿದ್ದರು.

ಬರ್ಮನ್ ದಿವಾಚಂದ್ರ ಹ್ರಂಗ್ ಖಾವ್ಲ್, ಆಶಿಫ್ ಸಾಹಾ ವಿಶ್ವಬಂಧು ಸೇನ್ ಸ್ಪೀಕರ್ ರಾಮೇಂದ್ರ ಚಂದ್ರ ದೇವನಾಥ್‌ರನ್ನು ಭೇಟಿಯಾಗಿ ಪತ್ರವೊಂದನ್ನು ನೀಡಿದರು. ಅದರಲ್ಲಿ ಶಾಸಕರಾದ ದಿಲೀಪ್ ಸರ್ಕಾರ್ ಹಾಗೂ ಪ್ರಾಣ್‌ಜಿತ್ ಸಿಂಗ್ ರಾಯ್‌ಯವರ ಹೆಸರುಳಿದ್ದವು. ಪತ್ರದಲ್ಲಿ ತಾವು ಟಿಎಂಸಿಗೆ ಸೇರಲಿದ್ದೇವೆಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News