ಪೊಲೀಸ್ ಕಸ್ಟಡಿಯಲ್ಲಿ ದಲಿತನ ಸಾವು
ಲಕ್ನೊ, ಆ.5: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ದಲಿತ ಯುವಕನೊಬ್ಬನು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದು, ಸ್ಥಳೀಯರಲ್ಲಿ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಘಟನೆಯ ಬಳಿಕ 12 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ.
ಪ್ರಕರಣದ ಸಂಬಂಧ ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಲೂಟಿ ಪ್ರಕರಣವೊಂದರ ಸಂಬಂಧ ವಿಚಾರಣೆಗಾಗಿ ಕಮಲ್ ವಾಲ್ಮೀಕಿ ಎಂಬ ಈ ದಲಿತ ಯುವಕನನ್ನು ಮಂಗಳವಾರ ತಡರಾತ್ರಿ ಪೊಲೀಸರು ಚಕೇರಿ ಪ್ರದೇಶದಿಂದ ವಶಕ್ಕೆ ತೆಗೆದುಕೊಂಡಿದ್ದರು. ಆತನೊಂದಿಗೆ ರಾಜು ಮಿಸ್ತ್ರಿ ಎಂಬ ಇನ್ನೊಬ್ಬ ವ್ಯಕ್ತಿಯನ್ನೂ ಪೊಲೀಸರು ಕರೆದೊಯ್ದಿದ್ದರು.
ಗುರುವಾರ, ಕಮಲ್(26) ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವುದನ್ನು ಆತನ ಸೋದರಿ ಕಂಡಿದ್ದಳು. ಮೃತನ ಬಂಧುಗಳು ಹಾಗೂ ಸ್ಥಳೀಯರು ಆಕ್ರೋಶಿತರಾಗಿ ಆಹಿರ್ವಾನ್ ಪೊಲೀಸ್ ಠಾಣೆಯೆದರು ಪ್ರತಿಭಟನೆ ನಡೆಸಿ ಠಾಣೆಗೆ ಕಲ್ಲೆಸೆದರು.
ರಾಷ್ಟ್ರೀಯ ಹೆದ್ದಾರಿ-2ನ್ನು ತಡೆದ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯ ಪ್ರಯೋಗ ನಡೆಸಿದರು.
ಕಮಲ್ನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದ ಇವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಉಪ ನಿರೀಕ್ಷಕ ಯೋಗೇಂದ್ರ ಸೋಳಂಕಿ ಹಾಗೂ 11 ಮಂದಿ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ, ಮಿಸ್ತ್ರಿ ಕಾಣೆಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.