×
Ad

ಅಬುಧಾಬಿಯಲ್ಲಿ ಅನುರಣಿಸಿದ ಕನ್ನಡ ಡಿಂಡಿಮ

Update: 2016-11-08 21:48 IST

’ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ, ಕೇವಲ ಭಾಷಾಭಿಮಾನವಲ್ಲ, ಕೇವಲ ಇತಿಹಾಸಾಭಿಮಾನವಲ್ಲ, ಇವೆಲ್ಲವುಗಳನ್ನು ಮೀರಿದ, ಇವೆಲ್ಲವುಗಳನ್ನು ಒಳಗೊಂಡ ಪರಿಶುದ್ಧ ಭಾವನೆ- ’ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು. (ಕೃತಿ -ಕರ್ನಾಟಕತ್ವದ ಸೂತ್ರಗಳು)

ಈ ಮೇಲಿನ ಆಲೂರು ವೆಂಕಟರಾಯರ ಅಣಿಮುತ್ತುಗಳ ಮೇಲೆ ಸುತ್ತಿಗೆಯಿಂದ ಎತ್ತೆತ್ತಿ ಹೊಡೆದರೂ ಅದು ಹೇಳುವ ಮಾತೊಂದೆ ಸತ್ಯಸ್ಯ ಸತ್ಯ ವಿನಃ ಇದು ಕ್ಲೀಷೆ ಎಂದೂ, ಅತಿಶಯೋಕ್ತಿಯೆಂದೂ ಬಾಯ್ತಪ್ಪಿಯೂ ಉಸುರುವುದಿಲ್ಲ.

ಅಂದಹಾಗೆ ಈ ಭಾವನೆ ನನ್ನಲ್ಲಿ ಬಲವಾಗಿ ಬೇರೂರಲು ಇತ್ತೀಚಿಗೆ ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಾಂದಿಯಾಯಿತು.

ಕರ್ನಾಟಕದ ವಿವಿಧ ಭಾಗಗಳಿಂದ ತಮ್ಮ ಜೀವನೋಪಾಯಕ್ಕಾಗಿ ಮರುಭೂಮಿಗೆ ಬಂದು ನೆಲೆಸಿರುವ ಕನ್ನಡಿಗರು ಇಂಡಿಯನ್ ಸೋಶಿಯಲ್ ಸೆಂಟರ್ ನ ಸಭಾಂಗಣದಲ್ಲಿ ನೆರೆದಿದ್ದನ್ನು ಕಂಡರೆ, ಅಲ್ಲಿ ನಡೆಯುತ್ತಿರುವ ಕರ್ನಾಟಕ ಸಂಸ್ಕೃತಿ ಮತ್ತು ಕಲಾ ಸೊಬಗನ್ನು ಕಂಡರೆ ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇದ್ದೆನೋ ಎನ್ನುವಂತೆ ಭಾಸವಾಗುತಿತ್ತು.

ಇಂಡಿಯನ್ ಸೋಶಿಯಲ್ ಸೆಂಟರ್‌ನ ಹೊರಗಡೆ ಕಾಲಿಟ್ಟರೆ ಉರ್ದು,ಹಿಂದಿ,ಅರೇಬಿಕ್, ಇಂಗ್ಲಿಷ್ ಹೀಗೆ ವಿವಿಧ ಭಾಷೆಗಳಲ್ಲಿ ವ್ಯವಹರಿಸುವ ಮಂದಿ.ಆದರೆ ಆ ಸಭಾಂಗಣದ ತುಂಬೆಲ್ಲಾ ಕನ್ನಡದ್ದೇ ಕಾರುಬಾರು. ನೆರೆದಿದ್ದ ಕರ್ನಾಟಕದ ಜನರ ಮುಖದಲ್ಲಿ ಆನಂದ ಎದ್ದು ಕಾಣುತಿತ್ತು. ಕರ್ನಾಟಕದ ವೈವಿಧ್ಯ ಸಂಸ್ಕೃತಿಗಳ ಬೇರಿನಿಂದ ಬಂದಂತಹ ಜನರು ಒಂದೇ ಸೂರಿನಡಿಯಲ್ಲಿ ಕರ್ನಾಟಕತ್ವದ ಸೌಗಂಧವನ್ನು ಪಸರಿಸುತ್ತಾ ಜೊತೆ ಸೇರಿರುವುದನ್ನು ನೋಡುವುದೇ ನಿಜಕ್ಕೂ ಕಣ್ಣುಗಳಿಗೆ ಹಬ್ಬ ಎಂದೆನಿಸಿತು.

ಕಾರ್ಯಕ್ರಮದತ್ತಲೊಂದು ಪಕ್ಷಿನೋಟ

ಸಮಾರಂಭದ ಉದ್ಘಾಟನೆಯನ್ನು ಯುಎಇ ಕನ್ನಡಿಗರ ಮಹಾಪೋಷಕರಾದ ಡಾ.ಬಿ.ಆರ್.ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್‌ನ ಉಪಾಧ್ಯಕ್ಷರು ರಾಜನ್ ಜಕಾರಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಜಾನ್ ವೇಗಸ್ ರ ಸಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸರ್ವರನ್ನು ಮನೋಹರ್ ತೋನ್ಸೆಯವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಿವ್ಯಾಶರ್ಮಾ ತಂಡದವರಿಂದ ಪ್ರಾರ್ಥನೆ, ಮತ್ತು ಮಹಿಳಾ ಸದಸ್ಯರ ತಂಡದಿಂದ ನಾಡಗೀತೆ, ವಿದುಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಮಕ್ಕಳ ತಂಡದ ಸ್ವಾಗತ ನೃತ್ಯ ಹಾಗೂ ಕರ್ನಾಟಕ ನವೋಲ್ಲಾಸ ರೂಪಕ, ವಿದುಷಿ ಸ್ವಪ್ನಾ ಕಿರಣ್ ನಿರ್ದೇಶನದಲ್ಲಿ ಮಕ್ಕಳ ತಂಡದ ಶಿವತಾಂಡವ ನೃತ್ಯ ಮತ್ತು ಸಂಗೀತನಾದದೊಂದಿಗೆ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕದ ಉಡುಗೆ ತೊಡುಗೆಯ ಆಕರ್ಷಕ ಪ್ರದರ್ಶನ ವೀಣಾ ಮಲ್ಯರ ನಿರ್ದೇಶನದಲ್ಲಿ ಪ್ರದರ್ಶನವಾಗಿ ಸರ್ವರ ಮನಸೆಳೆಯಿತು. ಹಿರಿಯ ಕಲಾವಿದ ವಿದ್ವಾನ್ ಸಿ.ನಾವಡರವರ ತಂಡದ ಕಂಸ ವಧೆ ಪ್ರದರ್ಶನ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಅಬುಧಾಬಿ ಕರ್ನಾಟಕ ಸಂಘದಿಂದ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ಪ್ರತಿಷ್ಠಿತ ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಯುಎಇಯಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ಮಾಡಿರುವ ಸಾಧನೆಗೆ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಬಿ.ಕೆ.ಗಣೇಶ್ ರೈಯವರಿಗೆ ಸರ್ವ ಸದಸ್ಯರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಡಾ.ಬಿ.ಆರ್.ಶೆಟ್ಟಿ ದಂಪತಿ ಪ್ರದಾನಿಸಿದರು. ಈ ವೇಳೆ ಸಮಾರಂಭಕ್ಕೆ ಬೆಂಬಲ ಪ್ರೋತ್ಸಾಹ, ಸಹಕಾರ ನೀಡಿದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯುಎಇಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಡಾ.ಬಿ.ಆರ್.ಶೆಟ್ಟಿ ದಂಪತಿ ಗೌರವಿಸಿದರು. ಬಳಿಕ ಮೃದುವಾಣಿ ತಂಡದವರಿಂದ ಕೋಲಾಟ ಮತ್ತು ಹನಿಗವನ ವಾಚನ ನಡೆಯಿತು. ಕವಿಗಳಾದ ಇರ್ಷಾದ್ ಮೂಡಬಿದಿರೆ, ಪ್ರಕಾಶ್ ರಾವ್ ಪಯ್ಯಿರು, ಗೋಪಿನಾಥ್ ರಾವ್, ಅರ್ಶದ್ ಹುಸೈನ್, ಅವನೀಶ ಭಟ್, ಸತೀಶ್ ಕುಲಾಲ್ ಮತ್ತು ಆರತಿ ಘಟಿಕ್ಕಾರ್ ಭಾಗವಹಿಸಿದ್ದರು.

ಯುಎಇ ಮಟ್ಟದ ವಿವಿಧ ತಂಡಗಳ ಸಮೂಹ ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದು ಯುಎಇಯ ವಿವಿಧ ಭಾಗಗಳಿಂದ ಒಂಬತ್ತು ತಂಡಗಳು ಭಾಗವಹಿಸಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಥಮ ಸ್ಥಾನ: ದ.ರಾ.ಬೇಂದ್ರೆ ತಂಡ – ಸಂಗೀತಾ ಶೆಟ್ಟಿಯರ ತಂಡ ದುಬೈ

ದ್ವಿತೀಯ ಸ್ಥಾನ:ಮಾಸ್ತಿ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ ಪ್ರಶಾಂತ್ ಶೆಣೈಯವರ ತಂಡ

ತೃತಿಯ ಸ್ಥಾನ:ಕಾರಂತ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ ದಿವ್ಯಾ ಶರ್ಮಾ ರ ತಂಡ

ಟಿವಿ ನಿರೂಪಕ ಅವಿನಾಶ್ ಕನ್ನಡ ಮೇರು ಕವಿಗಳ ಸಾಲುಗಳನ್ನು ಹಾಡುತ್ತಾ, ಜಾನಪದ ಮತ್ತು ಕರ್ನಾಟಕದ ವೈಭವವನ್ನು ಸಾರುವ ಕವಿತೆಗಳನ್ನು ಸಭಿಕರಿಗೆ ನೆನಪಿಸುತ್ತಾ ಕನ್ನಡದ ಕಂಪನ್ನು ಕಾರ್ಯಕ್ರಮದ ಉದ್ದಕ್ಕೂ ಜೀವಂತವಾಗಿರಿಸಿದರು. ಕುವೆಂಪು ಮತ್ತು ತೇಜಸ್ವಿಯವರ ಬರಹದ ಕೆಲವೊಂದು ಸಂಧರ್ಭಗಳನ್ನು ಸಭಿಕರ ಮುಂದೆ ಅನಾವರಣ ಗೊಳಿಸುವ ಮೂಲಕ ನಮ್ಮ ನಾಡಿನಲ್ಲಿ ಮನುಷ್ಯ ಸಂಬಂಧಗಳು ಎಷ್ಟು ಗಟ್ಟಿಯಾಗಿ ಇದ್ದವು ಎಂಬುದನ್ನು ಜ್ಞಾಪಿಸಿದರು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ ಎಲ್ಲಾ ಕನ್ನಡ ಪರ ಕಾರ್ಯಕ್ರಮಗಳ ಹಿಂದೆ ಪಾದಸರದಂತೆ ಕಾರ್ಯ ನಿರ್ವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡುವವರಲ್ಲಿ ನಿಸ್ಸಿಮರಾಗಿರುವ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸರ್ವೋತಮ ಶೆಟ್ಟಿ ಯವರಿಗೆ ಈ ಕಾರ್ಯಕ್ರಮದ ಯಶಸ್ಸು ಸಲ್ಲುತ್ತದೆ. ಹುಬ್ಬಳ್ಳಿಯ ತೌಸೀಫ್ ಪ್ರಥಮ ಭಾರಿಗೆ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ತನ್ನ ಉತ್ತರ ಕರ್ನಾಟಕದ ಗೆಳೆಯರ ಗಡಣದ ಜೊತೆ ಬಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಒಟ್ಟಿನಲ್ಲಿ ನೆರೆದಿದ್ದವರ ಹೃದಯದಲ್ಲಿ ಕನ್ನಡ ಡಿಂಡಿಮ ಅನುರಣಿಸುತಿತ್ತು.

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

ಅನಿವಾಸಿ ಕನ್ನಡಿಗರ ನಡುವಿನಲ್ಲಿ ಬೆಸೆದಿರುವ ಕನ್ನಡತ್ವದ ಬೆಸುಗೆ ಹೀಗೆ ನಿರಂತರವಾಗಲಿ. ಇದರ ಜ್ಯೋತಿ ನಮ್ಮ ನಾಡಲ್ಲೂ ಬೆಳಗಲಿ ಎಂಬುದೇ ಎಲ್ಲಾ ಅನಿವಾಸಿ ಕನ್ನಡಿಗರ ಹರಕೆ ಹಾರೈಕೆ.

Writer - ಯಹ್ಯಾ ಅಬ್ಬಾಸ್ ಉಜಿರೆ

contributor

Editor - ಯಹ್ಯಾ ಅಬ್ಬಾಸ್ ಉಜಿರೆ

contributor

Similar News